ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ಪ್ರತಿರೂಪವೇ ಡಾ.ಚನ್ನಬಸವ ಪಟ್ಟದ್ದೇವರು

Last Updated 1 ಡಿಸೆಂಬರ್ 2017, 7:02 IST
ಅಕ್ಷರ ಗಾತ್ರ

ಕಮಲನಗರ: ‘ಜಾತಿ, ಧರ್ಮ ರಹಿತ ಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನದಲ್ಲಿ ನಡೆದ ವೈಚಾರಿಕ ಕ್ರಾಂತಿಯನ್ನು 21ನೇ ಶತಮಾನದಲ್ಲಿ ಮುಂದುವರಿಸಿದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರು, ಬಸವಣ್ಣ ಹಾಗೂ ಅಲ್ಲಂಪ್ರಭುದೇವರ ಪ್ರತಿರೂಪದ ಮಹಾನ್‌ ಸಂತರಾಗಿದ್ದರು’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ 128ನೇ ಜಯಂತಿ ನಿಮಿತ್ತ ಹೊರಡುವ ‘ಬಸವ ಸಂದೇಶ ಪಾದಯಾತ್ರೆ’ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಉರ್ದು ಮತ್ತು ಮರಾಠಿ ಭಾಷೆಗಳ ಪ್ರಾಬಲ್ಯಕ್ಕೆ ಸಿಲುಕಿದ ಗಡಿಭಾಗದ ಕನ್ನಡಕ್ಕೆ ಮರುಜೀವ ತುಂಬಿದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರು, ಸಮಾಜದಲ್ಲಿನ ಅಶಕ್ತರಿಗೆ ಅಕ್ಷರ ದಾಸೋಹದ ಜತೆಗೆ ಅನ್ನ ದಾಸೋಹವನ್ನು ಕರುಣಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ ಮಹಾನ ಚೇತನರಾಗಿದ್ದರು’ ಎಂದರು.

ಸಾನಿಧ್ಯ ವಹಿಸಿದ್ದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಡಾ.ಚನ್ನಬಸವ ಪಟ್ಟದ್ದೇವರು ನುಡಿದಂತೆ ನಡೆದ ಶರಣರು. ಅವರ ಆದರ್ಶದ ಬದುಕಿನ ಜ್ಯೋತಿ ಎಲ್ಲರ ಅಂತರಂಗದಲ್ಲಿ ಬೆಳಗಲಿ ಎಂಬುದೆ ಬಸವಜ್ಯೋತಿ ಪಾದಯಾತ್ರೆಯ ಉದ್ದೇಶವಾಗಿದೆ’ ಎಂದರು.

ಶಾಸಕ ಪ್ರಭು ಚವಾಣ್‌ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಕಮಲನಗರದಲ್ಲಿ ಅಪೂರ್ಣ ಸ್ಥಿತಿಯಲ್ಲಿರುವ ಡಾ.ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನಕ್ಕೆ ಅಗತ್ಯವಿರುವ ಅನುದಾನ ಕಲ್ಪಿಸಿ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಮಾತನಾಡಿ, ‘ಸಕಲ ಜೀವಿಗಳ ಲೇಸನ್ನು ಬಯಸುವ ಬಸವತತ್ವವು, ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದು ಕೇವಲ ಲಿಂಗಾಯತರಿಗೆ ಮಾತ್ರ ಸೀಮಿತವಲ್ಲ’ ಎಂದು ಅಭಿಪ್ರಾಯಪಟ್ಟರು.

ಕಂಠೀರವ ಸ್ಟುಡಿಯೊ ನಿಗಮದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಮಾತನಾಡಿ, ‘ವಚನ ಸಾಹಿತ್ಯದಲ್ಲಿ ಭಕ್ತಿ, ಅನುಭವ ಜ್ಞಾನ, ದಲಿತರ ಸಂವೇದನೆ, ಸ್ತ್ರೀ ಸ್ವಾತಂತ್ರ್ಯದ ಧ್ವನಿ, ಕಾಯಕದ ಹಿರಿಮೆ, ದಾಸೋಹದ ಮಹಿಮೆ ಅಡಗಿದ್ದು, ವಚನಗಳ ಸಾರವನ್ನು ಎಲ್ಲರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು. ಪಾದಯಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದಿಂದ ಭಕ್ತರೂ ಪಾಲ್ಗೊಂಡಿದ್ದರು.

ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಮಹಾದೇವಮ್ಮ ತಾಯಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುಸಿಂಗ್‌ ಹಜಾರಿ, ಮಾರುತಿರಾವ ಚವಾಣ್‌, ಮುಖಂಡ ಪ್ರಕಾಶ ಟೊಣ್ಣೆ, ಶರಣೆ ಶಕುಂತಲಾ ಬೆಲ್ದಾಳ್‌, ಬಾಬುವಾಲಿ, ಶರಣಪ್ಪಾ ಮಿಠಾರೆ, ಅಪ್ಪಾಸಾಬ್‌ ದೇಶಮುಖ್‌, ಲಿಂಗಾನಂದ ಮಹಾಜನ್‌, ಪ್ರೊ.ಎಸ್‌.ಎನ್‌.ಶಿವಣಕರ್‌, ರಾಜಕುಮಾರ ಬಿರಾದಾರ್‌, ಪ್ರಕಾಶ ಮಾನಕರಿ, ರಾಚಪ್ಪಾ ಪಾಟೀಲ ಇದ್ದರು. ಪ್ರೊ.ಮಲ್ಲಮ್ಮ ಪಾಟೀಲ ಸ್ವಾಗತಿಸಿದರು. ಸಂಜೀವಕುಮಾರ ಜುಮ್ಮಾ ನಿರೂಪಿಸಿದರು.

ಪಾದಯಾತ್ರೆ: ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಕಮಲನಗರದಿಂದ ಆರಂಭಗೊಂಡು ಡಿಗ್ಗಿ, ಹೊಳಸಮುದ್ರ, ಸಾವಳಿ ಮೂಲಕ ಸಂಗಮ್‌ ಗ್ರಾಮ ತಲುಪಿ ವಾಸ್ತವ್ಯ ಮಾಡುವುದು. ಡಿಸೆಂಬರ್‌ 1 ರಂದು ಆಳಂದಿ, ಡೋಣಗಾಪುರ್‌ ಮೂಲಕ ಭಾಲ್ಕಿಯ ಚನ್ನಬಸವಾಶ್ರಮ ತಲುಪಲಿದೆ ಎಂದು ಶರಣ ಶಶಿಧರ್‌ ಕೋಸಂಬೆ ತಿಳಿಸಿದ್ದಾರೆ.

* * 

ಭೌತಿಕ ಸಂಪತ್ತು ಗಳಿಸುವ ಸ್ವಾಮೀಜಿಗಳು, ಸ್ವಾಮಿಗಳಲ್ಲ. ಸಮಾಜದಲ್ಲಿ ಅಂತಹ ಸ್ವಾಮೀಜಿಗಳನ್ನು ಜನ ಗೌರವಿಸುವುದಿಲ್ಲ.
ನಿಜಗುಣಾನಂದ ಸ್ವಾಮೀಜಿ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT