ಅರಸೀಕೆರೆ: ನಗರದ ಮೂಲಕ ಹಾದುಹೋಗಿರುವ ಅರಸೀಕೆರೆ– ಮೈಸೂರು ಹಾಗೂ ಅರಸೀಕೆರೆ–ಹಾಸನ ರಾಜ್ಯ ಹೆದ್ದಾರಿ ಹಳ್ಳದಿಣ್ಣೆ ಮತ್ತು ಗುಂಡಿಗಳ ಆಗರವಾಗಿದ್ದು, ವಾಹನ ಸವಾರರು ಎಚ್ಚರ ತಪ್ಪಿದರೆ ಪೆಟ್ಟು ಮಾಡಿಕೊಳ್ಳುವುದು ಖಚಿತ.
ರಾಷ್ಟ್ರೀಯ ಹೆದ್ದಾರಿ 206 ಬಿ.ಎಚ್.ರಸ್ತೆ, ಅಂಬೇಡ್ಕರ್ ವೃತ್ತದಿಂದ ಅಯ್ಯಪ್ಪ ಸ್ವಾಮಿ ದೇಗುಲದವರೆಗೂ ಹದಗೆಟ್ಟಿದೆ. ಕೆಲವೆಡೆ ಅರ್ಧ ಅಡಿಗೂ ಹೆಚ್ಚು ಗುಂಡಿ ಬಿದ್ದಿದೆ. ದುರಸ್ತಿ ಕುರಿತು ಪ್ರಶ್ನಿಸಿದರೆ, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಸ್ಪರ ಬೊಟ್ಟುಮಾಡುತ್ತಿದ್ದಾರೆ.
ಜನಪ್ರತಿನಿಧಿಗಳು ತಮಗೆ ಸಂಬಂಧ ಇಲ್ಲ ಎಂಬಂತೆ ಇದ್ದರೆ, ಸ್ಥಳೀಯರು ಸೇರಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಆಡಳಿತ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಸಾಗುವಂತಾಗಿದೆ.
ಇದು ರಾಜ್ಯ ಹೆದ್ದಾರಿ. ಲೋಕೋಪಯೋಗಿ ಇಲಾಖೆ ದುರಸ್ತಿ ಪಡಿಸಬೇಕು ಎಂಬುದು ನಗರಸಭೆ ನಿಲುವು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ುನಿರ್ದಿಷ್ಟ ಮಾರ್ಗ ನಗರಸಭೆ ಆಡಳಿತಕ್ಕೆ ಸೇರಿದೆ. ನಿರ್ವಹಣೆ ಮತ್ತು ದುರಸ್ತಿ ಅದರ ಹೊಣೆ ಎನ್ನುತ್ತಿದ್ದಾರೆ.
ಈ ರಸ್ತೆ ಡಾಂಬರು ಕಂಡು ವರ್ಷಗಳೇ ಕಳೆದಿವೆ, ಸೋನೆ ಮಳೆ ಬಂದರೂ ರಸ್ತೆ ಕೆಸರುಮಯವಾಗಲಿದೆ. ರಸ್ತೆಯಲ್ಲಿ ನೀರು ನಿಂತರೆ ಗುಂಡಿ ಅರಿಯದ ದ್ವಿಚಕ್ರ ವಾಹನ ಬಿದ್ದು ಪೆಟ್ಟಾಗಿ ಆಸ್ಪತ್ರೆ ಸೇರಿರುವ ಸಾಕಷ್ಟು ನಿದರ್ಶನಗಳಿವೆ.
ವಾರದೊಳಗೆ ರಸ್ತೆ ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೆಕು. ಇಲ್ಲದಿದ್ದರೆ ರೈತ ಸಂಘವು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಿದೆ ಜಿಲ್ಲಾ ರೈತ ಸಂಘದ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
* *
ಅರಸೀಕೆರೆ– ಮೈಸೂರು– ಹಾಸನ ರಸ್ತೆ ಲೋಕೋಪಯೋಗಿ ಇಲಾಖೆಗೆ ಬರಲಿದೆ. ರಸ್ತೆ ಅಭಿವೃದ್ಧಿ ಪಡಿಸಿ, ಹಸ್ತಾಂತರಿಸುವಂತೆ ಪತ್ರ ಬರದಿದ್ದೇವೆ. ಸಿ.ಎಸ್. ಪರಮೇಶ್ವರಪ್ಪ.
ಪೌರಾಯುಕ್ತ