ಕೂಡ್ಲಿಗಿ: ಉಜ್ಜನಿ ಗ್ರಾಮದ ಮಧ್ಯಭಾಗದಲ್ಲಿರುವ ಮದ್ಯದಂಗಡಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಮುಖಂಡರು ಹಾಗೂ ಗ್ರಾಮಸ್ಥರು ಈಚೆಗೆ ಗ್ರಾಮ ಪಂಚಾಯ್ತಿ ಆವರಣದಲ್ಲಿ ಉಪವಾಸ ಸತ್ಯಗ್ರಹ ನಡೆಸಿದರು.
‘ಪ್ರತಿದಿನ ಭಕ್ತರು ಮರುಳ ಸಿದ್ದೇಶ್ವರ ದೇವಸ್ಥಾನಕ್ಕೆ ಬರುತ್ತಾರೆ. ದೇವಸ್ಥಾನದ ಮಾರ್ಗ ಹಾಗೂ ರಥ ನಿಲ್ಲಿಸುವ ಸ್ಥಳದ ಪಕ್ಕದಲ್ಲಿ ಮದ್ಯದಂಗಡಿ ತೆರೆಯಲಾಗಿದೆ. ಮದ್ಯಸೇವನೆ ಮಾಡಿದವರು ದೇವಸ್ಥಾನದ ವಾತಾವರಣವನ್ನು ಗಲೀಜು ಮಾಡುತ್ತಿದ್ದಾರೆ. ಕೂಡಲೇ ಮದ್ಯದಂಗಡಿ ತೆರವುಗೊಳಿಸಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಮಹೇಶ್ ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಇನ್ಸ್ಪೆಕ್ಟರ್ ಸಿದ್ದಪ್ಪ, ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಧರಣಿ ಹಿಂಪಡೆಯರಿ ಎಂದು ಮನವಿ ಮಾಡಿದರು. ಆದರೆ, ಧರಣಿನಿರತರು ಬೇಡಿಕೆ ಈಡೇರುವವರಿಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.