ಔರಾದ್: ತಾಲ್ಲೂಕಿನ ಎರಡು ಕಡೆ ಗುರುವಾರ ₹ 3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಡೊಂಗರಗಾಂವ್ದಿಂದ ಸಾವರಗಾಂವ್ ವರೆಗೆ 8 ಕಿ.ಮೀ. ಮತ್ತು ಕರಕ್ಯಾಳ ಕ್ರಾಸ್ದಿಂದ ಎಕಂಬಾ ವರೆಗೆ 2.50 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಪ್ರಭು ಚವಾಣ್ ಚಾಲನೆ ನೀಡಿದರು.
ಈ ವೇಳೆ ಡೊಂಗರಗಾಂವ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು ‘ಈ ಎರಡು ರಸ್ತೆ ತೀರಾ ಹಾಳಾಗಿವೆ. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ’ ಸೂಚಿಸಿದರು.
‘ಬೀದರ್–ಔರಾದ್ ಸೇರಿದಂತೆ ತಾಲ್ಲೂಕಿನಲ್ಲಿ ವಿವಿಧ ರಸ್ತೆಗಳು ಹಾಳಾಗಿವೆ. ಆದರೆ ಸರ್ಕಾರ ತಾಲ್ಲೂಕಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ. ಪಕ್ಕದ ಭಾಲ್ಕಿ ಮತ್ತು ಹುಮನಾಬಾದ್ ತಾಲ್ಲೂಕಿಗೆ ಸರ್ಕಾರ ಬೇಕಾದಷ್ಟು ಅನುದಾನ ನೀಡುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬೀದರ್–ಔರಾದ್ ರಸ್ತೆಗೆ ₹ 10 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಲಿಖಿತ ಮನವಿ ಮಾಡಿ ಕೊಳ್ಳಲಾಗಿದೆ. ಆದರೆ ಸರ್ಕಾರ ₹ 40 ಲಕ್ಷದಲ್ಲಿ ದುರಸ್ತಿ ಮಾಡಲಾಗುವುದು ಎಂದು ಹೇಳುತ್ತಿದೆ. ಈ ಹಣ ಯಾತಕ್ಕೂ ಸಾಲದೆ ಹೆಸರಿಗೆ ಮಾತ್ರ ದುರಸ್ತಿ ಮಾಡಿ ಮತ್ತೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ.
ಬೀದರ್– ಔರಾದ್ ರಸ್ತೆ ವಿಷಯದಲ್ಲಿ ದೊಡ್ಡ ಹೋರಾಟ ಮಾಡಲಾಗುವುದು’ ಎಂದು ಅವರು ತಿಳಿಸಿದರು. ಜಿಪಂ. ಸದಸ್ಯ ಮಾರುತಿ ಚವಾಣ್, ಎಪಿಎಂಸಿ ಸದಸ್ಯ ರಮೇಶ ಉಪಾಸೆ, ಅನೀಲ ವಾಡೆಕರ್, ವೆಂಕಟರಾವ ಡೊಂಬಾಳೆ, ಬಾಲಾಜಿ ಬಿರಾದಾರ, ರಾಜೇಂದ್ರ ಮಾಳಿ ಇದ್ದರು.