ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, ಡಿ. 3–12–1967

Last Updated 2 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

7 ರಂದು ರಾಜ್ಯ ಕಾಂಗ್ರೆಸ್ ಶಾಸಕ ಪಕ್ಷದ ನೂತನ ನಾಯಕರ ಆಯ್ಕೆ
ಮುಂಬೈ, ಡಿ. 2–
ಮೈಸೂರು ಕಾಂಗ್ರೆಸ್ ಶಾಸಕ ಪಕ್ಷದ ನೂತನ ನಾಯಕರನ್ನು ಆಯ್ಕೆ ಮಾಡಲು ಈ ತಿಂಗಳು 7 ರಂದು ಶಾಸಕ ಪಕ್ಷದ ಸಭೆಯನ್ನು ಕರೆಯಲು ತಾವು ಉದ್ದೇಶಿಸಿರುವುದಾಗಿ ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಈ ರಾತ್ರಿ ಇಲ್ಲಿ ತಿಳಿಸಿದರು.

ನವದೆಹಲಿಯಿಂದ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕೃತ ಅಭ್ಯರ್ಥಿ ಶ್ರೀ ನಿಜಲಿಂಗಪ್ಪ ಅವರಿಗೆ ಸಾಂತಾಕ್ರೂಜ್ ವಿಮಾನ ನಿಲ್ದಾಣದಲ್ಲಿ ಮುಂಬೈ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯು ಅದ್ಭುತ ಸ್ವಾಗತ ನೀಡಿತು.

ಜನವರಿ ತಿಂಗಳಲ್ಲಿ ಸಾಂಗ್ಲಿಯಲ್ಲಿ ನಡೆಯುವ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷ ಪದವಿ ವಹಿಸಿಕೊಳ್ಳುವುದಾಗಿಯೂ ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿರುವ ಕಾರಣ ಮೈಸೂರು–ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ತಮ್ಮ ನಿಲುವಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲವೆಂದೂ ಆ ವರದಿಯನ್ನು ಉಭಯ ಪಕ್ಷಗಳು ಒಪ್ಪಿಕೊಳ್ಳಬೇಕೆಂದೂ ಅವರು ತಿಳಿಸಿದರು.

ಮಿತ್ರರಷ್ಟೇ ಪತ್ನಿಗೂ ಅಚ್ಚರಿ ಕಾಂಗ್ರೆಸ್ ಗಾದಿಗೇರಲು ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪ ಒಪ್ಪಿದುದು ಅವರ ಮಿತ್ರರು ಹಾಗೂ ಬೆಂಬಲಿಗರಿಗಾದಷ್ಟೇ ಅವರ ಪತ್ನಿ ಶ್ರಿಮತಿ ಮುರಿಗೆಮ್ಮನವರಿಗೂ ಆಶ್ಚರ್ಯ.

ಇದು ಅವರಲ್ಲಿ ಮೊದಲು ಉಂಟಾದ ಪ್ರತಿಕ್ರಿಯೆ. ‘ದೆಹಲಿಗೆ ಹೋಗುವಾಗ ನಮಗೆಲ್ಲ ಹೇಳಿದ್ದರು, ಸ್ನೇಹಿತರಿಗೆಲ್ಲ ಹೇಳಿದ್ದರು. ನಾನು ಆಗೋದಿಲ್ಲ ಅಂತ’ ಇದೇ ಅವರಿಗಾದ ಆಶ್ಚರ್ಯಕ್ಕೆ ಕಾರಣ.

‘ತುಂಬಾ ಒತ್ತಾಯ ಮಾಡಿದರು ಅಂತ ಕಾಣುತ್ತೆ’ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಲು ಕಾರಣವಾದ ದೆಹಲಿಯಲ್ಲಿ ನಡೆದ ಬೆಳವಣಿಗೆಯನ್ನು ಅರಿತಿದ್ದರು.

ಮೊದಲ ಮೂರು ದಿನಗಳು ಮಹಾಜನ್ ವರದಿ ಚರ್ಚೆ; ವಿಧಾನಮಂಡಲದ ಕಲಾಪ
ಬೆಂಗಳೂರು, ಡಿ. 2–
ಗುರುವಾರ ಆರಂಭವಾಗಲಿರುವ ವಿಧಾನ ಮಂಡಲದ ಉಭಯ ಸದನಗಳಲ್ಲಿಯೂ ಮೊದಲ ಮೂರು ದಿನಗಳು ಮಹಾಜನ್ ಆಯೋಗದ ವರದಿಯ ಬಗ್ಗೆ ಚರ್ಚಿಸಲಾಗುವುದು. ಈ ಸಂಬಂಧದಲ್ಲಿ ಸರಕಾರವೇ ನಿರ್ಣಯ ಒಂದನ್ನು ಮಂಡಿಸುವ ನಿರೀಕ್ಷೆ ಇದೆ.

ವಿಧಾನಸಭೆಯಲ್ಲಿ ಡಿಸೆಂಬರ್ 11 ಮತ್ತು 12 ರಂದು ಸರಕಾರಿ ಮಸೂದೆಗಳನ್ನೂ ಚರ್ಚಿಸಿ 13 ರಂದು ಹಣಕಾಸಿಗೆ ಸಂಬಂಧಿಸಿದ ಕಾರ್ಯ ಕಲಾಪಗಳನ್ನು ನಡೆಸಲಾಗುವುದು. 14 ರಂದು ಮಸೂದೆಯನ್ನು, 15 ಮತ್ತು 16 ರಂದು ಖಾಸಗಿ ನಿರ್ಣಯಗಳನ್ನೂ ಸಭೆ ಚರ್ಚಿಸುವುದು.

ರಾಜ್ಯಪಾಲರ ಹುದ್ದೆ ರದ್ದಿಗೆ ನಿರ್ಣಯ: 8ಕ್ಕೆ ರಾಜ್ಯಸಭೆ ಚರ್ಚೆ
ನವದೆಹಲಿ, ಡಿ. 2–
ರಾಜ್ಯಪಾಲರ ಹುದ್ದೆಯನ್ನು ರದ್ದು ಮಾಡಲು ಖಾಸಗೀ ನಿರ್ಣಯವೊಂದು ರಾಜ್ಯ ಸಭೆಯ ಮುಂದೆ ಡಿ. 8ರಂದು ಚರ್ಚೆಗೆ ಬರಲಿದೆ.

ಈ ನಿರ್ಣಯವನ್ನು ಕಮ್ಯುನಿಸ್ಟ್ ಸದಸ್ಯ ಡಾ. ಜಡ್.ಎ. ಅಹ್ಮದರು ಮಂಡಿಸಿದ್ದಾರೆ. ರಾಜ್ಯಪಾಲರ ಹುದ್ದೆಯನ್ನು ರದ್ದು ಮಾಡಲು ಸಂವಿಧಾನಕ್ಕೆ ತಿದ್ದುಪಡಿಯನ್ನು ಈ ನಿರ್ಣಯದಲ್ಲಿ ಸಲಹೆ ಮಾಡಲಾಗಿದೆ.

ಅಕಾಲಿ ದಳದಿಂದ ಮುಖ್ಯಮಂತ್ರಿ ಗಿಲ್, 5 ಸಚಿವರ ಉಚ್ಚಾಟನೆ
ಲೂದಿಯಾನ, ಡಿ. 2–
ಪಂಜಾಬಿನ ಮುಖ್ಯಮಂತ್ರಿ ಲಕ್ಷ್ಮಣ್ ಸಿಂಗ್ ಗಿಲ್ ಮತ್ತು ಇತರ ಆರು ಮಂದಿಯನ್ನು ಸಂತ್ ಅಕಾಲಿ ದಳದಿಂದ ಉಚ್ಚಾಟಿಸಲಾಗಿದೆ.

ಹೀರ ಬಳಿ ಇರುವ ಗುರುದ್ವಾರ ಆಲಂಗೀರ್‌ನಲ್ಲಿ ಇಂದು ಸೇರಿದ್ದ ಸಂತ್ ಅಕಾಲಿ ದಳದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT