ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಾಪ ಸಿಂಹ ಹೇಳಿಕೆ ಖಂಡಿಸಿ ಬೃಹತ್‌ ಪ್ರತಿಭಟನೆ

Last Updated 3 ಡಿಸೆಂಬರ್ 2017, 5:30 IST
ಅಕ್ಷರ ಗಾತ್ರ

ವಿಜಯಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಿತ್ತೂರು ಚನ್ನಮ್ಮ, ಒನಕೆ ಓಬವ್ವ ಕುರಿತಂತೆ ಸಂಸದ ಪ್ರತಾಪ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಟ್ವಿಟ್‌ ಮಾಡಿರುವುದು, ಸಚಿವ ವಿನಯ ಕುಲಕರ್ಣಿ ತೆಜೋವಧೆ ಮಾಡುತ್ತಿರುವುದನ್ನು ಖಂಡಿಸಿ ಶನಿವಾರ ನಗರದಲ್ಲಿ ಪಕ್ಷಾತೀತವಾಗಿ ನಡೆಸಲಾಯಿತು.

ಇಲ್ಲಿನ ಸಿದ್ಧೇಶ್ವರ ದೇವಸ್ಥಾನ ಎದುರು ಜಮಾಯಿಸಿದ ಪಕ್ಷಾತೀತವಾಗಿ ಜಿಲ್ಲೆಯ ಸಹಸ್ರಾರು ಜನರು, ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಪ್ರತಿಭಟನಾ ಸಭೆ ನಡೆಸಲಾಯಿತು. ನಂತರ ಡಾ.ಬಿ.ಆರ್.ಅಂಬೇಡ್ಕರ ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಕಿತ್ತೂರು ಚನ್ನಮ್ಮ, ಒನಕೆ ಓಬವ್ವ ಕುರಿತು ಸಂಸದ ಪ್ರತಾಪ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೀಳಾಗಿ, ಅಸ್ಯ್ಯವಾಗಿ ಟ್ವಿಟ್‌ ಮಾಡಿರುವುದು ಆತನ ಹೀನ ಸಂಸ್ಕೃತಿ ತೋರಿಸುತ್ತದೆ. ಹೆಣ್ಣು ಮಕ್ಕಳಿಗೆ ಮರ್ಯಾದೆ ನೀಡುವ ಸಂಸ್ಕೃತಿ ಬಿಜೆಪಿಗರಿಗಿಲ್ಲ. ಪ್ರಚಾರಕ್ಕಾಗಿ ಎಂತಹ ಕೀಳ ಮಟ್ಟಕ್ಕೂ ಇಳಿಯುತ್ತಾರೆ. ಇಂತವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಹೋರಾಟದಲ್ಲಿ ಮುಂಚೋಣಿಯಲ್ಲಿರುವ ಸಚಿವ ವಿನಯ ಕುಲಕರ್ಣಿ ಸಹಿಸಲಾರದೇ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ಎರಡು ವರ್ಷದ ಹಿಂದೆ ಕೊಲೆಯಾದ ರೌಡಿ ಶೀಟರ್ ಪ್ರಕರಣ ಮುಂದಿಟ್ಟುಕೊಂಡು ವಿನಾಕಾರಣ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಾವು ಬಗ್ಗುವುದಿಲ್ಲ. ರೈತ ಪರ ಕಾಳಜಿ ಹೊಂದಿರುವ ಅವರನ್ನು ರೈತರು, ಲಿಂಗಾಯತರು ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.

ವಕೀಲೆ ಲಕ್ಷ್ಮೀ ದೇಸಾಯಿ ಮಾತನಾಡಿ, ದೇಶಕ್ಕಾಗಿ ಪ್ರಾಣದ ಹಂಗು ತೊರೆದು ದಿಟ್ಟತನದಿಂದ ಹೋರಾಟ ಮಾಡಿದ ಚನ್ನಮ್ಮ, ಓಬವ್ವ ಕುರಿತು ಅವಹೇಳನಕಾರಿ ಟ್ವಿಟ್‌ ಮಾಡುವ ಮೂಲಕ ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ. ಇದು ಮಹಿಳೆಯರು ಅರಗಿಸಿಕೊಳ್ಳದಂತಾಗಿದೆ. ಇತ್ತೀಚಿಗೆ ಸಂಸದ ಪ್ರತಾಪ ಸಿಂಹಗೆ ಬುದ್ಧಿ ಬ್ರಮಣೆಯಾಗಿದೆ. ಹೀಗಾಗಿ ಮನಸ್ಸಿ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಮನೆಯವರನ್ನು ಕೂಡ ತಾವು ಅವರಂತೆ ಕರೆಯಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ತಕ್ಷಣ ಬೇಸತ್ತ ಕ್ಷೇಮೆ ಕೋರಿ, ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿದರು. ರವಿಗೌಡ ಪಾಟೀಲ, ವಿ.ಎಸ್‌.ಪಾಟೀಲ, ಎಂ.ಆರ್.ಪಾಟೀಲ ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅವಮಾನಕ್ಕೆ ಖಂಡನೆ
ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಕುರಿತು ಸಂಸದ ಪ್ರತಾಪ ಸಿಂಹ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ಪಕ್ಷಾತೀತವಾಗಿ ವಿಜಯಪುರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರೆದುಕೊಂಡು ಬಂದು ಕಾಂಗ್ರೆಸ್‌ ರ್‌್ಯಾಲಿ ನಡೆಸುವ ಮೂಲಕ ನಮಗೆ ಅವಮಾನ ಮಾಡಿದ್ದಾರೆ ಎಂದು ಮುದ್ದೇಬಿಹಾಳ ತಾಲ್ಲೂಕಿನಿಂದ ಆಗಮಿಸಿದ ನೂರಾರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಿಂದ 50 ಟ್ರ್ಯಾಕ್ಸ್ ಮೂಲಕ 750ಕ್ಕೂ ಅಧಿಕ ಜನರು ಆಗಮಿಸಿದ್ದೇವೆ. ವಿಜಯಪುರಕ್ಕೆ ಬರುವತನ ಪಕ್ಷಾತೀತ ಹೋರಾಟ ಎಂದು ತಿಳಿದುಕೊಂಡಿದ್ದೇವು. ಆದರೆ, ಇಲ್ಲಿಗೆ ಬಂದ ನಂತರ ಕಾಂಗ್ರೆಸ್‌ ರ್‌್ಯಾಲಿ ಎಂಬುವುದು ತಿಳಿಯಿತು. ಕಾಂಗ್ರೆಸ್‌ನವರು ತಮ್ಮ ಬೆಳೆ ಬೇಯಿಸಿಕೊಳ್ಳು ಸುಳ್ಳು ಹೇಳಿ ಜಿಲ್ಲೆಯ ಜನರನ್ನು ಕರೆಸಿದ್ದಾರೆ. ಹೀಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೇ ಮರಳಿ ಹೋಗುತ್ತಿದ್ದೇವೆ ಎಂದು ಕಾಮರಾಜ ಬಿರಾದಾರ, ಮುಂಗಪ್ಪ ಹಡಲಗೇರಿ, ದಾನಪ್ಪ ಅಂಗಡಿ, ರಮೇಶ ಢವಳಗಿ, ಬಸಲಿಂಗಪ್ಪ ರಕ್ಕಸಗಿ, ಶೇಖಣ್ಣ ನಾಗರಬೆಟ್ಟ ಪ್ರಜಾವಾಣಿಗೆ ತಿಳಿಸಿದರು.

* * 

ಹೆಣ್ಣು ಮಕ್ಕಳಿಗೆ ಗೌರ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಪ್ರತಾಪ ಸಿಂಹ ವೀರ ನಾರಿಯರಿಗೆ ಅಗೌರವ ತೋರುವ ಮೂಲಕ ಅವರ ಹೀನ ಸಂಸ್ಕೃತಿ ತೋರಿಸಿದ್ದಾರೆ
ಎಂ.ಬಿ.ಪಾಟೀಲ
ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT