ಹೊಸನಗರ: ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯು ಎರಡು ದಶಕಗಳಲ್ಲಿ ಬಳಕೆಯ ಪ್ರಮಾಣ ಕುಸಿಯುತ್ತಿರುವುದು ಭಾಷಾ ಲೋಕದ ದುರಂತ ಎಂದು ಕವಲೆ ದುರ್ಗದ ಕೆಳದಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಾಸ್ತಿಕಟ್ಟೆ ಘಟಕವು ಈಚೆಗೆ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ರಾಜ್ಯ ಭಾಷೆ ಆಗಬೇಕು. ಪ್ರಾಥಮಿಕ ಹಂತದಲ್ಲಿ ಕನ್ನಡ ಕಡ್ಡಾಯ ಆಗಬೇಕು ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದರು.
ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷೆ ಭಾವನ ಆರ್.ಗೌಡ, ಜೆಸಿಐ ರಾಷ್ಟ್ರೀಯ ಪೂರ್ವ ವಲಯಾಧ್ಯಕ್ಷೆ ಮಂಜುಳಾ ವಿ.ಪ್ರಸಾದ ಕನ್ನಡ ನಾಡು ನುಡಿ ಕುರಿತು ಉಪನ್ಯಾಸ ನೀಡಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಹೆಗ್ಗಡೆ, ಉಪಾಧ್ಯಕ್ಷ ವಿಜಯ ಬಿಳಿಗಿರಿ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ವಿ.ಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಅನಿಲ ಕುಮಾರ್ ಹಾಜರಿದ್ದರು.
ಮಾಸ್ತಿಕಟ್ಟೆ ಘಟಕದ ಕರವೇ ಅಧ್ಯಕ್ಷ ವಾಸಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಕ್ಕಳಿಂದ ಕನ್ನಡ ನಾಡು ನುಡಿ ಕುರಿತಂತೆ ನೃತ್ಯ ರೂಪಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಿಥುನ ಎಂಬ ನಾಟಕ ಪ್ರದರ್ಶನ ನಡೆಯಿತು. ರಂಜತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕೆ.ಎನ್.ಅನಿಲಕುಮಾರ ವಂದಿಸಿದರು.