ಇನ್ನು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು ಪುಸ್ತಕ ರೂಪದಲ್ಲಿ ಕೊಳೆಯುತ್ತಿರುವ ವಿಚಾರವನ್ನು ವಿಜಯಕಾಂತ ಪಾಟೀಲ ಪ್ರಸ್ತಾಪಿಸಿದ್ದಾರೆ (ಚಂಪಾ ಹೇಳಿಕೆ ಸರಿ, ವಾ.ವಾ., ಡಿ. 1). ಅಧ್ಯಕ್ಷರ ಭಾಷಣಗಳು ಮಾತ್ರವಲ್ಲ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳೂ ಅದೇ ಸ್ಥಿತಿಯಲ್ಲಿವೆ. ಅದಕ್ಕೆ ಪ್ರಮುಖ ಕಾರಣ ಸಾಹಿತ್ಯ ಪರಿಷತ್ತಿಗೆ ಗಟ್ಟಿತನ ಇಲ್ಲದಿರುವುದು. ಸದ್ಯ ಸಾಹಿತ್ಯ ಪರಿಷತ್ತಿನ ಚುನಾವಣೆಯೂ ವಿಧಾನಸಭೆ, ಲೋಕಸಭೆಯ ಚುನಾವಣೆಗಳ ಮಟ್ಟಕ್ಕೆ ಇಳಿದಿದೆ ಎಂಬ ದೂರಿದೆ. ಈಗ ಸಮ್ಮೇಳನಾಧ್ಯಕ್ಷ ಭಾಷಣವೂ ಅದೇ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂಬ ಚಿಂತೆ ನನ್ನಂಥವರಿಗೆ. ಹಾಗಾದಲ್ಲಿ ಅದಕ್ಕೆ ಚಂಪಾ ಮುನ್ನುಡಿ ಬರೆದಂತಾಗುವುದಿಲ್ಲವೇ? ಈ ದಿಸೆಯಲ್ಲಿ ದೇವನೂರ ಮಹಾದೇವ ಅವರ ನಿಲುವು ಮಹತ್ವದ್ದು. ಆದರೆ ಅವರ ನಿಲುವನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಯಾಕೆಂದರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡದ್ದೊಂದೇ ಚಿಂತೆಯಲ್ಲ!