ಮಾಗಡಿ: ಪ್ರಜಾಪ್ರಭುತ್ವದಲ್ಲಿ ಮಾದಿಗರು ಬಹುಸಂಖ್ಯೆಯಲ್ಲಿದ್ದರೂ, ಅಧಿಕಾರದಲ್ಲಿ ಬಲದಲ್ಲಿ ಬಲಹೀನರು ಎಂದು ರಾಜ್ಯ ಮಾಗಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೇಶವಮೂರ್ತಿ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೋರಾಟದಿಂದ ಯಾವುದೇ ಪ್ರಯೋಜನವಿಲ್ಲ, ವಿಧಾನ ಸಭೆಯಲ್ಲಿ ಮಾದಿಗರ ಜನಸಂಖ್ಯೆ ಅನುಸಾರ ಶಾಸಕ
ರನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಮಾದಿಗ ಸಮುದಾಯದ ಮುಖಂಡ ಕೃಷ್ಣ, ಡಿಸೆಂಬರ್ 11ರಂದು ಬೆಳಿಗ್ಗೆ 10ಗಂಟೆಗೆ ರಾಯಚೂರು ನಗರದ ಮಹಿಳಾ ಸಮಾಜದ ಮೈದಾನದಲ್ಲಿ ಮಾದಿಗರ ರಾಜಕೀಯ ಆತ್ಮಾವಲೋಕನ ಸಭೆ ನಡೆಯಲಿದ್ದು, ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕಾರಕ್ಕೆ ರಾಜಕೀಯ ಹೋರಾಟ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಮುದಾಯದ ಮುಖಂಡ ಸಿ.ಜಯರಾಮ್ ಮಾತನಾಡಿ, ‘ಮಾದಿಗರಿಗೆ ಗಾಂಧೀಜಿ ದೊಡ್ಡ ದ್ರೋಹ ಮಾಡಿದ್ದಾರೆ. ರಾಜ್ಯದಲ್ಲಿ ಅಸ್ಪೃಶ್ಯರಲ್ಲದ ಲಂಬಾಣಿ, ಬೋವಿ ಜಾತಿಗಳನ್ನು ಎಸ್ಸಿ ಪಟ್ಟಿಗೆ ಸೇರಿಸಿ ಡಿ.ದೇವರಾಜ ಅರಸು ನಮಗೆ ದ್ರೋಹ ಎಸಗಿದ್ದಾರೆ’ ಎಂದು ಆರೋಪಿಸಿದರು.
ಮುಖಂಡ ಉಮೇಶ್ ಮಾತನಾಡಿ ಪಟ್ಟಣದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬೂ ಜಗಜೀವನ್ ರಾಮ್ ಅವರ ಭವನ ನಿರ್ಮಿಸದೆ ಇರುವ ಬಗ್ಗೆ ಬೇಸರ ವ್ಯಕ್ತ ಪಡಿಸಿ, ಮಾದಿಗರ ವಿರೋಧಿಗಳಿಗೆ ಮತಹಾಕದಂತೆ ಅರಿವು ಮೂಡಿಸಲಾಗುವುದು ಎಂದರು.
ಮಾದಿಗ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಿಲಕ್ಷ್ಮಣ್, ನರಸಿಂಹಮೂರ್ತಿ, ಗಂಗರಾಜು, ರಾಮಚಂದ್ರಯ್ಯ, ಕೇಶವ್, ಚೌಡಪ್ಪ ಅವರು ವರದಿ ಜಾರಿಗೆ ಆಗ್ರಹಿಸಿದರು.