ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಲಕರನ್ನು ಸಮಾಜದ ಮುಖ್ಯವಾಹಿನಿಗೆ ತನ್ನಿ

Last Updated 4 ಡಿಸೆಂಬರ್ 2017, 6:18 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿನ ಅಂಗವಿಕಲರಿಗೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ ಕುಮಾರ್ ಸಲಹೆ ನೀಡಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ನಡೆದ ವಿಶ್ವ ಅಂಗವಿಲಕಲರ ದಿನಾಚರಣೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಅಂಗವಿಕಲರ ಸಬಲೀಕರಣಕ್ಕಾಗಿ ಎರಡು ಮೂರು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲು ನಡೆಸಿದ ಆಂದೋಲನದ ರೀತಿ ಅಂಗವಿಲಕಲರನ್ನು ಅಭಿವೃದ್ಧಿಪಡಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಕೋರಿದರು.

ಸಚಿವರಾಗಿ ಅಧಿಕಾರ ಸ್ವೀಕರಿಸಿದ ಒಂದೂವರೆ ತಿಂಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಭೆ ಕರೆದು ಎಲ್ಲ ತಾಲ್ಲೂಕುಗಳಲ್ಲೂ ಎಷ್ಟು ಮಂದಿ ವಿಕಲಚೇತನರಿದ್ದಾರೆ, ಪಿಂಚಣಿ ಸೌಲಭ್ಯ ಸಿಗದಿರುವವರು ಹಾಗೂ ಅಂಗವೈಕಲ್ಯ ಸ್ವರೂಪಕ್ಕೆ ತಕ್ಕ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ಎಷ್ಟು ಮಂದಿಗೆ ಸಾಧನ ಸಲಕರಣೆ ಅವಶ್ಯವಿದೆ ಎಂಬುದನ್ನು ಪಟ್ಟಿ ಮಾಡಲು ಸೂಚಿಸಲಾಗಿತ್ತು ಎಂದರು.

ಅಧಿಕಾರಿಗಳು ಜಾಣರು: ವೀಡಿಯೋ ಕಾನ್ಫರೆನ್ಸ್ ಕರೆದು ಸೂಚನೆ ನೀಡಿ 2017ರ ಜ.14ಕ್ಕೆ ವಿತರಿಸಲು ಗಡುವು ನೀಡಿದ್ದೆ. ಆದರೆ ಅಧಿಕಾರಿಗಳು ಜಾಣರು. ನನ್ನ ಕಣ್ಣು ತಪ್ಪಿಸಿ ಕೇವಲ ಒಂದು ಇಲಾಖೆ ಕರೆಯಿಸಿ ಮುಖ್ಯಮಂತ್ರಿಗಳಿಂದ ಕಾರ್ಯಕ್ರಮ ಮಾಡಿಸಿದರು ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.

2018ರ ಫೆಬ್ರವರಿಯೊಳಗೆ ಜಿಲ್ಲೆಯಲ್ಲಿನ ಅಂಗವಿಕಲರನ್ನು ಅಭಿವೃದ್ಧಿಪಡಿಸಲು ಅಗತ್ಯ ಕಾರ್ಯಕ್ರಮ ರೂಪಿಸಲಾಗುವುದು. ಜತೆಗೆ ಅಗತ್ಯ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಮುಂದಿನ ಬಜೆಟ್‌ನಲ್ಲಿ ಮಂಜೂರು ಮಾಡಿಸುತ್ತೇನೆ ಎಂದು ಹೇಳಿದರು.

ಅಂಗವಿಕಲ ಮಕ್ಕಳಿಗೆ ಜನ್ಮ ನೀಡಿರುವ ಪೋಷಕರು ತಮ್ಮ ಜೀವನದ ಉದ್ದಕ್ಕೂ ಮಾನಸಿಕವಾಗಿ ಅಂಗವಿಲಕರಾಗಿರುತ್ತಾರೆ. ತಾನು ಮೃತಪಟ್ಟ ನಂತರ ನಮ್ಮ ಮಕ್ಕಳನ್ನು ಯಾರು ಪೋಷಿಸುತ್ತಾರೆ ಎಂಬ ಯಾತನೆಯಲ್ಲಿ ತೊಡಗಿರುತ್ತಾರೆ. ಅಂಗವಿಲಕಲ ಮಕ್ಕಳನ್ನು ಹೃದಯವಂತರು ಮಾತ್ರ ನೋಡಿಕೊಳ್ಳಲು ಸಾಧ್ಯ ಎಂದರು.

ಜಿಲ್ಲೆಯಲ್ಲಿ ಪಿಂಚಣಿಗೆ, ಸಾಧನ ಸಲಕರಣೆಗಳು ಅಗತ್ಯವಿರುವ ವಿಕಲಚೇತನರ ಪಟ್ಟಿಯನ್ನು ಎರಡು ತಿಂಗಳೊಳಗೆ ಸಿದ್ದಪಡಿಸಬೇಕು. ಅಂಗವಿಲಕಲರ ಮಕ್ಕಳ ಕೈಯಲ್ಲಿ ನೃತ್ಯ ಮಾಡಿಸುವುದು ದೊಡ್ಡ ಸಾಧನೆ. ಅದೇ ರೀತಿ ಅವರಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶಿಸಲು ಶಿಕ್ಷಕರು ವೇದಿಕೆ ಕಲ್ಪಿಸಿಕೊಡಬೇಕು ಎಂದು ಸಲಹೆ ನೀಡಿದರು.

ಪ್ರಾಧ್ಯಾನ್ಯತೆ ಸಿಗಬೇಕು: ಅಂಗವಿಲಕಲರಲ್ಲಿ ನ್ಯೂನತೆ ಜತೆಗೆ ಒಂದಲ್ಲಾ ಒಂದು ಪ್ರತಿಭೆ, ಕಲೆ ಇದ್ದೇ ಇರುತ್ತದೆ. ಆದರೆ ವಿದೇಶಗಳಲ್ಲಿ ಅವರಿಗೆ ಸಿಗುತ್ತಿರುವ ಪ್ರಾಧಾನ್ಯತೆ, ಸಮಾನತೆ ಭಾರತದಲ್ಲಿ ಸಿಗದೆ ಇರುವುದು ವಿಷಾದಕರ ಸಂಗತಿ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಹೇಳಿದರು.

6 ತಿಂಗಳಿಂದ ಪಿಂಚಣಿ ಪಡೆಯಲಾಗದಿರುವ ಅನೇಕರು ತಮ್ಮ ಬಳಿಗೆ ದೂರು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯಾಗಿರುವ ತಮ್ಮಿಂದ 10 ಜನರಿಗೆ ಹೊಲಿಗೆ ಯಂತ್ರ, ಒಬ್ಬರಿಗೆ ಸಾಲ ಕೊಡಿಸಲು ಸಾಧ್ಯವಾಗಿಲ್ಲವೆಂದರೆ ಹೇಗೆ. ಇದಕ್ಕೆ ಸಮಾಜ, ಸಂಘಸಂಸ್ಥೆಗಳು ಕೈಜೋಡಿಸಿ ಅವರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಅವರಿಗೆ ಮೀಸಲಿರಿಸಿರುವ ಶೇ 3ರಷ್ಟು ಅನುದಾನವನ್ನು ಕಾಟಾಚಾರಕ್ಕೆ ನೀಡುವುದಲ್ಲ. ಸಮರ್ಪಕವಾಗಿ ತಲುಪಿಸುವ ಕೆಲಸವಾಗಬೇಕು. ಅದಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮನಸ್ಥಿತಿಗಳು ಬದಲಾಗಬೇಕು: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ಮಾತನಾಡಿ, ಅಂಗವಿಲಕರು ದೈಹಿಕವಾಗಿ ನ್ಯೂನತೆ ಹೊಂದಿದ್ದರೆ, ಉಳಿದವರು ಮಾನಸಿಕವಾಗಿ ನ್ಯೂನತೆ ಹೊಂದಿದ್ದಾರೆ. ದೇವಾಲಯದಲ್ಲಿ ಅರ್ಚಕರಿಗೆ ಸಾವಿರಾರುರೂಗಳನ್ನು ನೀಡಿ, ಹೊರಗಿರುವ ಭಿಕ್ಷುಕರನ್ನು ಕಡೆಗಣಿಸುತ್ತಿರುವಂತಹ ನಮ್ಮ ಮನಸ್ಥಿತಿಗಳು ಬದಲಾಗಬೇಕಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳ ವಿಶೇಷ ಚೇತನ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅರ್ಹ ಫಲಾನುಭವಿಗಳಿಗೆ ದ್ವಿಚಕ್ರವಾಹನಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಉಪ ಉಪಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸೌಮ್ಯ, ಅಂಗವಿಲಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಪನಿರ್ದೇಶಕಿ ಎಚ್.ಸಿ.ನಾಗಮಣಿ, ನಂದಾದೀಪ ವಿದ್ಯಾಸಂಸ್ಥೆಯ ಮುಖ್ಯಸ್ಥ ಅಪ್ಪುರಾವ್, ಅಂತರಗಂಗೆ ಬುದ್ದಿಮಾಂದ್ಯರ ವಸತಿ ಶಾಲೆಯ ಕಾರ್ಯದರ್ಶಿ ಶಂಕರ್, ವಾದಿರಾಜ ಟ್ರಸ್ಟ್‌ನ ಮುಖ್ಯಸ್ಥ ರಾಧಾಕೃಷ್ಣ, ಸಾರ್ಕ್ ಸಂಸ್ಥೆಯ ಮುಖ್ಯಸ್ಥ ಮೇಘರಾಜು, ಆಶಾಕಿರಣ ಸಂಸ್ಥೆಯ ಮುಖ್ಯಸ್ಥರ ಗಾಯಿತ್ರಿ ಭಾಗವಹಿಸಿದ್ದರು.

* * 

ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತವಾಗಿ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ ಜಿಲ್ಲೆಯಲ್ಲಿನ ಅಂಗವಿಲಕರಿಗೆ ಸೌಕರ್ಯ ಕಲ್ಪಿಸುವ ದಿಸೆಯಲ್ಲಿ ಎರಡು ತಿಂಗಳೊಳಗೆ ಪಟ್ಟಿ ಸಿದ್ದಪಡಿಸಿ ರಾಜ್ಯಕ್ಕೆ ಮಾದರಿಯಾಗಬೇಕು
ಕೆ.ಆರ್.ರಮೇಶ್‌ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT