ಮಲೇಬೆನ್ನೂರು: ಭದ್ರಾನಾಲೆಯ ನೀರಿನ ಹರಿವಿಗೆ ಅಡ್ಡಿಯಾಗಿರುವ ಹೂಳು ಎತ್ತಿಸದಿದ್ದಲ್ಲಿ ಡಿ. 5ರಿಂದ ಕರ್ನಾಟಕ ನೀರಾವರಿ ನಿಗಮದ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ವಾಸನದ ಓಂಕಾರಪ್ಪ ಶನಿವಾರ ಹೇಳಿದರು.
ಬೇಸಿಗೆ ಹಂಗಾಮಿಗೆ ನೀರು ಬಿಡುಗಡೆ ಮಾಡುವ ದಿನಾಂಕ ಪ್ರಕಟವಾಗಿದ್ದು, ನಾಲೆ ಸ್ಥಿತಿಗತಿ ಎಂಜಿನಿಯರ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸ್ಥಳೀಯ ಇಇ, ಎಇಇಗಳು, ಕಾಡಾ ಅಧ್ಯಕ್ಷರು, ಎಸ್ಇ, ಸಿಇ ಕಾಮಗಾರಿ ಮಾಡಿಸಲು ಅನುದಾನ ಇಲ್ಲ ಎನ್ನುತ್ತಾರೆ. ನಾಲೆ ಸಂಪೂರ್ಣ ಹಾಳಾಗಿ ನೀರು ಹರಿಯದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಲೆ ದುರಸ್ತಿಗೆ ಮನಸ್ಸು ಮಾಡಿ ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ ಎಂದು ರೈತ ಸಂಘದ ಪ್ರಭೂಗೌಡ, ಫಾಲಾಕ್ಷಪ್ಪ ಬೇಸರ ವ್ಯಕ್ತಪಡಿಸಿದರು. ಪ್ರತಿ ಬಾರಿ ಬೇಸಿಗೆ ವೇಳೆ ಕೊನೆ ಭಾಗಕ್ಕೆ ನಾಲೆ ನೀರು ಮರೀಚಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಡಿಕೆ, ತೆಂಗಿನ ತೋಟ ಉಳಿಸಿಕೊಳ್ಳುವುದು ಕಷ್ಟ ಎಂದರು.