ಬೆಂಗಳೂರು,ಡಿ.4–‘ಕೆಲವು ಕಾಲ ನಾನು ನಿಮ್ಮ ಮುಖ್ಯಮಂತ್ರಿಯಾಗಿರುತ್ತೇನೆ. ಚುನಾಯಿತನಾಗದಿದ್ದರೆ ಇನ್ನೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿರುತ್ತೇನೆ’ ‘ಬಾಲಬ್ರುಯಿ’ಯಲ್ಲಿ ನಗುತ್ತ ಎದ್ದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಸೋಮವಾರ ವರದಿಗಾರರನ್ನು ‘ನಿರಾಯುಧ’ಗೊಳಿಸಿದರು.
ಮೂರು ತಿಂಗಳಲ್ಲಿ ಮುಖ್ಯಮಂತ್ರಿ ಪದವಿ ಬಿಡಬೇಕೆಂದು ಗೊತ್ತಾಗಿದೆಯೆಂಬ ಅವಧಿ ಕುರಿತು ಕೇಳಿದಾಗ ಶ್ರೀಯುತರು ನೀಡಿದ ಉತ್ತರವಿದು.
ಮುಖ್ಯಮಂತ್ರಿಗಳು ರಾಜ್ಯದ ಹೊರಗಡೆ ಪ್ರವಾಸ ಮುಗಿಸಿಕೊಂಡು ಹಿಂದುರಿಗಿದಾಗಲೆಲ್ಲ ವರದಿಗಾರರು ಭೇಟಿ ಮಾಡುವುದು ನಡೆದುಬಂದಿರುವ ಸಂಪ್ರದಾಯ. ಬೆಳಿಗ್ಗೆ 9.30ಕ್ಕೆ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಬಂದು ಇಳಿದಾಗ ಅದೇ ವಿನಯ– ವಿಶಾಲ ನಗೆ. ಆದರೆ ಒಂದು ವ್ಯತ್ಯಾಸ– ನಿಜಲಿಂಗಪ್ಪ ಅವರು ಭಾವೀ ಕಾಂಗ್ರೆಸ್ ಅಧ್ಯಕ್ಷರು.
**
ಕೊಟ್ಟ ಹೆಣ್ಣು; ಇತ್ತ ಆಜ್ಞೆ
ನವದೆಹಲಿ, ಡಿ. 4– ಮಾತು, ಹೆಣ್ಣು ಮತ್ತು ಉಡುಗೊರೆ– ಇವು ಮೂರನ್ನೂ ಹಿಂದಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ.
‘ನಾರದ ಸ್ಮೃತಿಯಲ್ಲಿನ ಈ ಸೂಕ್ತಿಯನ್ನು ಇಂದು ಲೋಕಸಭೆಯಲ್ಲಿ ಉದ್ಧರಿಸಿದವರು ಆಂಧ್ರದ ನ್ಯಾಯಶಾಸ್ತ್ರವೇತ್ತ ಶ್ರೀ ಟಿ. ವಿಶ್ವನಾಥಂ.
ಇದೇ ರೀತಿ, ರಾಜ್ಯವೊಂದರ ಮಂತ್ರಿ ಮಂಡಲ ವಜಾ ಮಾಡುವುದಕ್ಕೆ ಆ ರಾಜ್ಯದ ರಾಜ್ಯಪಾಲರು ಹೊರಡಿಸಿದ ಆಜ್ಞೆಯನ್ನೂ ಸಹ ಹಿಂದಕ್ಕೆ ತೆಗೆದುಕೊಳ್ಳುವುದು ಅಸಾಧ್ಯ ಎಂದರು. ಪಶ್ಚಿಮ ಬಂಗಾಳದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ರಾಜ್ಯಪಾಲರಿಗೆ ಇರುವ ಅಧಿಕಾರಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ಒತ್ತಿ ಹೇಳಿದರು.
**
ಉತ್ತಮ ಸ್ಥಿತಿಯಲ್ಲಿ ‘ಬದಲಿ ಹೃದಯ’
ಕೇಪ್ಟೌನ್, ಡಿ. 4– ಇಲ್ಲಿನ 56 ವರ್ಷ ವಯಸ್ಸಿನ ವ್ಯಾಪಾರಿ ಲೂಯಿಸ್ ವಾಪ್ಕನ್ಸ್ಕಿ ನಿನ್ನೆ ಐತಿಹಾಸಿಕ ಮಹತ್ವದ ಚಿಕಿತ್ಸೆ ಮಾಡಿಸಿಕೊಂಡು, ಸತ್ತ ಯುವತಿಯ ಹೃದಯವನ್ನು ಅಳವಡಿಸಿಕೊಂಡ 33 ಗಂಟೆಗಳ ನಂತರ ಪ್ರಜ್ಞೆಯಿಂದಿದ್ದ.