ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯಲ್ಲಿ ನಡೆದ ಮೂರು ದಿನಗಳ ಸಾಂಸ್ಕೃತಿಕ ಸಂಭ್ರಮ ಆಳ್ವಾಸ್ ನುಡಿಸಿರಿಗೆ ‘ಸ್ವಚ್ಛತಾ ಸಿರಿ’ಯೊಂದಿಗೆ ಅರ್ಥಪೂರ್ಣ ತೆರೆ ಬಿದ್ದಿತು. ಲಕ್ಷಾಂತರ ಮಂದಿ ಬಂದು ಹೋದ ಆಳ್ವಾಸ್ ನುಡಿಸಿರಿ ಸಮ್ಮೇಳನದ ವಿದ್ಯಾಗಿರಿ ಆವರಣದಲ್ಲಿ ಸೋಮವಾರ ಕ್ಷಿಪ್ರಗತಿಯಲ್ಲಿ ಕಸಕಡ್ಡಿಗಳ ತೆರವು ಕಾರ್ಯ ನಡೆಯಿತು. ಮೂರು ದಿನಗಳ ಸಮ್ಮೇಳನದ ಬಳಿಕ, ಮತ್ತೆ ಸ್ವಚ್ಛ ವಿದ್ಯಾಗಿರಿಯಾಗಿ ಕಂಗೊಳಿಸುತ್ತಿದೆ.
ಕೆಲವು ತ್ಯಾಜ್ಯಗಳನ್ನು ಆಯಾ ದಿನವೇ ವಿಲೇವಾರಿ ಮಾಡಲಾಗುತ್ತಿದ್ದಾದರೂ, ಸ್ಟಾಲ್ಗಳಲ್ಲಿ ಹಾಗೂ ಇತರ ಕಡೆಗಳಲ್ಲಿದ್ದ ಕಸಕಡ್ಡಿಗಳು, ಇತರ ತ್ಯಾಜ್ಯಗಳ ವಿಲೇವಾರಿ ಮತ್ತು ವಿದ್ಯಾಗಿರಿ ಆವರಣದ ಸ್ವಚ್ಛತಾ ಕಾರ್ಯವನ್ನು, ನುಡಿಸಿರಿಯ ಉತ್ಸಾಹದಲ್ಲಿಯೇ ಮಾಡಲಾಯಿತು.
ವಿದ್ಯಾಗಿರಿಯಿಂದ ಪೇಟೆ ಮತ್ತು ವಿದ್ಯಾಗಿರಿಯಿಂದ ಪುತ್ತಿಗೆ ಹೈಸ್ಕೂಲ್ ಆವರಣದವರೆಗೆ ರಸ್ತೆಯನ್ನು ಸ್ವಚ್ಛ ಗೊಳಿಸಲಾಯಿತು. ಪೇಟೆ ಸೇರಿದಂತೆ ವಿದ್ಯಾಗಿರಿ ಸುತ್ತ ಮುತ್ತ ಅಳವಡಿಸಲಾಗಿದ್ದ ನುಡಿಸಿರಿ ಸಮ್ಮೇಳನದ ಸುಮಾರು ಮೂರು ಸಾವಿರಕ್ಕೂ ಮಿಕ್ಕಿದ ಬ್ಯಾನರ್ಗಳು, ನೂರಕ್ಕೂ ಅಧಿಕ ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಯಿತು.
ಸ್ವಚ್ಛತೆಗಾಗಿ 120 ಕಾರ್ಮಿಕರು ಶ್ರಮಿಸಿದ್ದು, ಇದರ ಜತೆಗೆ 7 ಟ್ರ್ಯಾಕ್ಟರ್, 4 ಟ್ರಾಲಿಗಳನ್ನು ಬಳಸಲಾಗಿದೆ. ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಮೇಲುಸ್ತುವಾರಿಯಲ್ಲಿ, ಸುಧಾಕರ ಪೂಂಜ ಮತ್ತು ಪ್ರೇಮನಾಥ ಶೆಟ್ಟಿ ಉಸ್ತುವಾರಿ ನೋಡಿಕೊಂಡರು.
ದಿನವೊಂದಕ್ಕೆ ಟನ್ನಷ್ಟು ತ್ಯಾಜ್ಯ ವಿಲೇವಾರಿ ಆಗಿದೆ ಎಂದು ಸ್ವಚ್ಛತಾ ಮುಖ್ಯಸ್ಥರು ತಿಳಿಸಿದ್ದಾರೆ. ಸುಧಾಕರ ಪೂಂಜ ಅವರು, ದ್ವಿಚಕ್ರ ವಾಹನದ ಎದುರು ‘ಆಳ್ವಾಸ್ ನುಡಿಸಿರಿ ಒಂದು ಹೆಜ್ಜೆ ಸ್ವಚ್ಛತೆ ಕಡೆಗೆ’ ಎಂಬ ಸಂದೇಶದ ಸ್ಟಿಕರ್ ಅಂಟಿಸಿದ್ದರು.