ಮದ್ದೂರು: ಇಕ್ಕಟ್ಟಾದ, ಡಾಂಬರು ಕಾಣದೇ ಕೊರಕಲು ಬಿದ್ದ ರಸ್ತೆಗಳು. ರಸ್ತೆಯಲ್ಲೇ ಹರಿಯುವ ಚರಂಡಿ ನೀರು. ಕಾವೇರಿ ಕುಡಿಯುವ ನೀರಿನ ಸೌಲಭ್ಯದ ಕೊರತೆ. ಇದು ಪಟ್ಟಣದ ಕೆಮ್ಮಣ್ಣುನಾಲೆ ಪಕ್ಕದ ಗೊರವನಹಳ್ಳಿ ಹೊಸ ಬಡಾವಣೆ ಇಂದಿಗೂ ಮೂಲಸೌಲಭ್ಯ ಗಳಿಂದ ಮಾರು ದೂರ. ಇಲ್ಲಿ 50ಕ್ಕೂ ಮನೆಗಳಿವೆ.
ಆದರೆ ಬಡಾವಣೆಗೆ ಸರಿಯಾದ ರಸ್ತೆ ಇಂದಿಗೂ ಇಲ್ಲ. ಜನರೇ ಮಣ್ಣು ಸುರಿದು ಮಾಡಿಕೊಂಡಿರುವ ಕಚ್ಚಾ ರಸ್ತೆಯೇ ಜನರಿಗೆ ಸಂಪರ್ಕ ಸೇತುವಾಗಿದೆ. ಒಳ, ಹೊರ ಚರಂಡಿ ಸೌಲಭ್ಯವೂ ಇಲ್ಲಿ ಇಲ್ಲ. ಒಂದು ವರ್ಷದ ಹಿಂದೆ ಇಲ್ಲಿನ ನಿವಾಸಿಗಳು ಶಾಸಕರಿಗೆ ಮನವಿ ಸಲ್ಲಿಸಿದ ಮೇರೆಗೆ ಒಂದು ರಸ್ತೆಯ ಒಂದು ಬದಿಯಲ್ಲಿ ₹ 4.5ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಿಸಲಾಯಿತು.
ವೈಜ್ಞಾನಿಕವಾಗಿ ಚರಂಡಿ ನಿರ್ಮಿಸದ ಕಾರಣ ಚರಂಡಿ ನೀರು ಅಲ್ಲಲ್ಲಿ ನಿಂತು ಸಾಂಕ್ರಾಮಿಕ ರೋಗಗಳ ವಾಹಕವಾಗಿ ಮಾರ್ಪಟ್ಟಿದೆ. ಚರಂಡಿಗೆ ಕಾಂಕ್ರಿಟ್ ಹಾಕಿಲ್ಲ. ಕಾರಣ; ವರ್ಷದಲ್ಲೇ ಒಂದುಭಾಗ ಕುಸಿದು ಬಿದ್ದಿದೆ.
ಗೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಈ ಹೊಸ ಬಡಾವಣೆಯ ಬಹುತೇಕ ಮನೆಗಳು ಇಂದಿಗೂ ಕಂದಾಯ ಇಲಾಖೆ ವ್ಯಾಪ್ತಿ
ಯಲ್ಲಿವೆ. ಹೀಗಾಗಿ ಬಡಾವಣೆಗೆ ಮೂಲಸೌಕರ್ಯ ಒದಗಿಸಲು ಪುರಸಭೆಗೆ ಸಾಧ್ಯವಾಗಿಲ್ಲ.
ಬಡಾವಣೆಯಲ್ಲಿ 4 ಅಡ್ಡರಸ್ತೆಗಳಿವೆ. ಒಂದು ರಸ್ತೆಗಾದರೂ ಗೊರವನಹಳ್ಳಿ ಪಂಚಾಯಿತಿ ಡಾಂಬರು ಇರಲಿ, ಕಡೇ ಪಕ್ಷ ಜಲ್ಲಿಕಲ್ಲು, ಮಣ್ಣನ್ನು ಸಹ ಸುರಿದಿಲ್ಲ. ಮಳೆ ಬಂದಾಗ ನೀರು ಮನೆ ಆವರಣಕ್ಕೆ ನುಗ್ಗಲಿದೆ. ಇಡೀ ರಸ್ತೆ ರಾಡಿಯಾಗುತ್ತದೆ. ಆ ಸಂದರ್ಭದಲ್ಲಿ ಜನರು ಈ ರಸ್ತೆಯಲ್ಲಿ ಕಸರತ್ತು ಮಾಡುವುದು ಅನಿವಾರ್ಯ. ಒಳಚರಂಡಿ ಸೌಲಭ್ಯ ಇಲ್ಲದ ಕಾರಣ ಜನರೇ ಮನೆ ಆವರಣದಲ್ಲೇ ಶೌಚಗುಂಡಿ ನಿರ್ಮಿಸಿಕೊಂಡಿದ್ದಾರೆ.
ಬಡಾವಣೆಯಲ್ಲಿ ಕಾವೇರಿ ನೀರುಇ ಪೂರೈಕೆಗೆ ಪೈಪ್ಲೇನ್ ಅಳವಡಿಸಲಾಗಿದೆ. ಸಂಪರ್ಕ ನೀಡದ ಕಾರಣ ಇಲ್ಲಿನ ಜನರು ಫ್ಲೋರೈಡ್ ಯುಕ್ತ ಕೊಳವೆಬಾವಿ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ಒದಗಿದೆ.
ಈ ಬಡಾವಣೆಯನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಮನವಿ ಸಲ್ಲಿಸಿದ್ದೇವೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸೇರಿಸುವ ಭರವಸೆ ನೀಡಿ ದ್ದಾರೆ ಎನ್ನುತ್ತಾರೆ ಶಿಕ್ಷಕ ಪುಟ್ಟಸ್ವಾಮಿ.
ಒಟ್ಟಾರೆ ಪಟ್ಟಣಕ್ಕೆ ಹೊಂದಿ ಕೊಂಡಿರುವ ಈ ಬಡಾವಣೆಯನ್ನು ಪುರಸಭೆ ವ್ಯಾಪ್ತಿಗೆ ಸೇರಿಸುವ ಮೂಲಕ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಪುರಸಭೆ ಗಮನಹರಿಸಬೇಕಿದೆ ಎಂಬುದು ನಿವಾಸಿಗಳ ಆಗ್ರಹವಾಗಿದೆ.
* *
10 ವರ್ಷದ ಹಿಂದೆಯೇ ಪಟ್ಟಣಕ್ಕೆ ಹತ್ತಿರವಿದೆ ಎಂದು ಇಲ್ಲಿ ಮನೆ ಕಟ್ಟಿದೆವು. ಆದರೆ ಯಾವುದೇ ಸೌಕರ್ಯ ಒದಗಿಸದ ಕಾರಣ ನಮ್ಮ ಸ್ಥಿತಿ ಅತಂತ್ರವಾಗಿದೆ.
ಸರೋಜಮ್ಮ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.