ಹಾಸನ: ಜಿಲ್ಲಾ, ತಾಲ್ಲೂಕು ಕೇಂದ್ರದ ಸರ್ಕಾರಿ ಕಚೇರಿಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ವಂದೇ ಮಾತರಂ ಸಂಘಟನೆ ಅಧ್ಯಕ್ಷ ಧರ್ಮರಾಜ ಕಡಗ ಆಗ್ರಹಿಸಿದರು.
ಸರ್ಕಾರಿ ಕಚೇರಿ ಮತ್ತು ಕಾಲೇಜುಗಳ ಬಳಿ ಕ್ಯಾಂಟೀನ್ ಆರಂಭಿಸಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಸದ್ಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ನಿಯೋಗ ತೆರಳಿ ಒತ್ತಾಯಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸುವಂತೆ ಮೂರು ತಿಂಗಳ ಹಿಂದೆ ಸಂಘಟನೆ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಲಾಗಿತ್ತು. ಸರ್ಕಾರ ಮನವಿಗೆ ಸ್ಪಂದಿಸಿ ಜಿಲ್ಲಾ ಕೇಂದ್ರಕ್ಕೂ ವಿಸ್ತರಿಸಿದೆ ಎಂದರು. ಗೋಷ್ಠಿಯಲ್ಲಿ ಸಂಘಟನೆ ಸದಸ್ಯರಾದ ತೇಜೇಸ್, ಭುವನ, ಚೇತನ್ ಇದ್ದರು.