ಹಿರೇಕೆರೂರ: ಪಟ್ಟಣಕ್ಕೆ ಮಂಗಳವಾರ (ಡಿ.5) ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಪಟ್ಟಣ ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಹಾಗೂ ಮಾಜಿ ಶಾಸಕ ಬಿ.ಸಿ.ಪಾಟೀಲ ಸೇರಿದಂತೆ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ಗಳು, ಪೋಸ್ಟರ್ಗಳು ಹಾಗೂ ಕಾಂಗ್ರೆಸ್ ಪಕ್ಷದ ಬಂಟಿಂಗ್ಸ್ಗಳು ಪಟ್ಟಣದ ತುಂಬ ರಾರಾಜಿಸುತ್ತಿವೆ.
ತಾಲ್ಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ವೇದಿಕೆ ಬಹುತೇಕ ಸಜ್ಜಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಸಿ.ಪಾಟೀಲ ಹಾಗೂ ಮುಖಂಡರು ಕಾರ್ಯಕ್ರಮ ನಡೆಯುವ ತಾಲ್ಲೂಕು ಕ್ರೀಡಾಂಗಣಕ್ಕೆ ಸೋಮವಾರ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಮಾಜಿ ಶಾಸಕ ಬಿ.ಸಿ.ಪಾಟೀಲ, ‘ರಟ್ಟೀಹಳ್ಳಿ ತಾಲ್ಲೂಕು ರಚನೆ ಸೇರಿದಂತೆ ಹಲವು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ನೀಡಿದ್ದಾರೆ.
ಹೀಗಾಗಿ ಸಿದ್ದರಾಮಯ್ಯ, ಸಚಿವ ಪಾಟೀಲ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರನ್ನು ಸಮಾವೇಶದಲ್ಲಿ ಬೆಳ್ಳಿ ಗದೆಯನ್ನು ನೀಡಿ ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಎನ್.ಗಂಗೋಳ, ಕರೇಗೌಡ ಸಣ್ಣಕ್ಕಿ, ಮುಖಂಡರಾದ ಡಿ.ಸಿ.ಪಾಟೀಲ, ಮಹಮ್ಮದ ಹುಸೇನ್ ವಡ್ಡಿನಕಟ್ಟಿ, ಬಸವರಾಜ ಸಾಲಿ, ಹೊನ್ನಪ್ಪ ಸಾಲಿ, ರುದ್ರಪ್ಪ ಶೆಟ್ಟರ್, ಶಂಭು ಹಂಸಭಾವಿ ಹಾಜರಿದ್ದರು.