ಹುಮನಾಬಾದ್: ಖಾಸಗಿ ಶಾಲೆಗಳ ಪೈಪೋಟಿ ನಡುವೆಯೂ ನಗರದ ವಾಂಜ್ರಿ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಉತ್ತಮ ಪ್ರಜೆಗಳನ್ನಾಗಿಸಲು ಅವರು ಪಣ ತೊಟ್ಟಿದ್ದಾರೆ.
2005ರಲ್ಲಿ ಆರಂಭಗೊಂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಹಳೆಯ ಮತ್ತು 9 ಹೊಸ ಕೋಣೆಗಳು ಸೇರಿ ಒಟ್ಟು 11ವರ್ಗ ಕೋಣೆಗಳಿವೆ. ವಿವಿಧ ವರ್ಗದ ಮಕ್ಕಳಿಗೆ ಶಿಕ್ಷಕರು ಉತ್ತಮ ರೀತಿಯಲ್ಲಿ ಪಾಠ ಮಾಡುತ್ತಾರೆ.
ಮಕ್ಕಳಿಗೆ ಕಬಡ್ಡಿ, ಲೇಜಿಮ್, ಡಂಬಲ್ಸ್ ಮೊದಲಾದ ಕ್ರೀಡೆಗಳ ತರಬೇತಿ ನೀಡಲಾಗುತ್ತದೆ. ಚಿಕ್ಕ ಗ್ರಂಥಾಲಯ, ಲೇಜಿಮ್, ಡಂಬಲ್ಸ್, 2 ಡೋಲ್ ಸೇರಿ ಒಂದಿಷ್ಟು ಕ್ರೀಡಾ ಸಾಮಗ್ರಿಗಳಿದ್ದು, ಮಕ್ಕಳಿಗೆ ಉಪಯುಕ್ತವಾಗಿವೆ.
2011ನೇ ಸಾಲಿನಲ್ಲಿ ಸರ್ಕಾರವು 5 ಕಂಪ್ಯೂಟರ್, ಎನ್.ಜಿ.ಪಿ.ಎಲ್ ಯೋಜನೆಯಡಿ 1 ಕಲರ್ ಟಿವಿ ಒದಗಿಸಿತ್ತು. ರೇಡಿಯೋ ಸಹ ಇದೆ. ಸರ್ಕಾರಿ ಕೆಲಸಕ್ಕಾಗಿ ಇಲ್ಲಿದ್ದ 5 ಕಂಪ್ಯೂಟರ್ಗಳನ್ನು ತಹಶೀಲ್ದಾರ್ ಕಚೇರಿಗೆ ಒಯ್ಯಲಾಗಿದೆ.
ಶಾಲೆಗೆ ಕಾಂಪೌಂಡ್ ಸೌಲಭ್ಯ ಕೂಡ ಸಮರ್ಪಕವಾಗಿಲ್ಲ. ಸಮತಟ್ಟಾದ ನೆಲವಿರದ ಮಕ್ಕಳಿಗೆ ಮೈದಾನ ಸೌಲಭ್ಯವೂ ಇಲ್ಲ. ಮಕ್ಕಳಿಗೆ ಆಟವಾಡಲು ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿಂದ ಕ್ರೀಡಾ ತರಬೇತಿ ಪಡೆಯಲು ಕಷ್ಟವಾಗುತ್ತದೆ.
ಶಾಲಾ ಆವರಣದಲ್ಲಿ ಎಲ್ಲಿ ಬೇಕೆಂದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಹುಳುಹುಪ್ಪಡಿಗಳ ಕಾಟ ಹಚ್ಚಿದೆ. ಹಂದಿಗಳ ಹಾವಳಿ ಹೆಚ್ಚಿದ್ದು, ಮಕ್ಕಳು ಮಧ್ಯಾಹ್ನ ನೆಮ್ಮದಿಯಿಂದ ಊಟ ಮಾಡಲು ಸಹ ಆಗುತ್ತಿಲ್ಲ ಎಂದು ಮಕ್ಕಳ ಪಾಲಕರು ಹೇಳುತ್ತಾರೆ.
ಹಂದಿಗಳನ್ನು ಓಡಿಸಲು ಪ್ರಯತ್ನಿಸಿದರೆ, ಅವೇ ಬೆನ್ನತ್ತಿಕೊಂಡು ಬರುತ್ತವೆ. ಗಿಡಗಂಟಿಗಳ ಹಿಂಭಾಗದಲ್ಲೇ ಕೆಲವರು ಶೌಚಕ್ಕೆ ಹೋಗುವುದರಿಂದ ದುರ್ನಾತ ಬೀರುತ್ತದೆ. ಅಲ್ಲಲ್ಲೇ ಮದ್ಯದ ಬಾಟ್ಲಿಗಳು ಚೆಲ್ಲಲ್ಪಟ್ಟಿರುತ್ತದೆ. ಇದೆಲ್ಲವನ್ನೂ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.
ಶಾಲೆಯಲ್ಲಿನ ಸಮಸ್ಯೆ ಬಗೆಹರಿಸಿದರೆ ಮಕ್ಕಳ ಸಂಖ್ಯೆ ಹೆಚ್ಚಿಸಿ, ಇನ್ನೂ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಮುಖ್ಯಶಿಕ್ಷಕ ಡಿ.ಚಂದ್ರಕಾಂತ ಹೇಳುತ್ತಾರೆ.
* *
ವರ್ಗ ಕೋಣೆ, ಅಗತ್ಯ ಸಿಬ್ಬಂದಿ, ಗುಣಾತ್ಮಕ ಬೋಧನೆಗೆ ಸಹಕಾರ ಎಲ್ಲವೂ ಇದೆ. ಆದರೆ ಆವರಣದಲ್ಲಿ ಕಾಂಪೌಂಡ್ ಇರದ ಬೇರೆ ಬೇರೆ ರೀತಿಯ ಸಮಸ್ಯೆ ಎದುರಾಗಿದೆ.
ಡಿ.ಚಂದ್ರಕಾಂತ, ಮುಖ್ಯ ಶಿಕ್ಷಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.