ತಲಿಯಾಮುರ/ತ್ರಿಪುರ: ದಕ್ಷಿಣ ಮಹಾರಾಣಿಪುರದ ಸರತ್ ಚಂದ್ರ ಎಡಿಸಿ ಗ್ರಾಮದಲ್ಲಿ ಬುಡಕಟ್ಟು ಕುಟುಂಬವೊಂದು ತನ್ನ ಎಂಟು ತಿಂಗಳ ಹೆಣ್ಣು ಮಗುವನ್ನು ಕೇವಲ ₹200ಗೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹಸಿವಿನಿಂದ ಕಂಗಾಲಾಗಿದ್ದ ಕುಟುಂಬಕ್ಕೆ ಆಹಾರ ಒದಗಿಸಲು ಮಗುವನ್ನು ಮಾರಾಟ ಮಾಡಿರುವುದಾಗಿ ಆ ಕುಟುಂಬದ ಕರ್ಣ ದೆಬರ್ಮಾ ಅವರು ಒಪ್ಪಿಕೊಂಡಿದ್ದಾರೆ.
‘ನನ್ನ ಬಳಿ ಇರುವುದು ಎಪಿಲ್ ಕಾರ್ಡ್. ಹಾಗಾಗಿ ನನಗೆ ಸರ್ಕಾರದಿಂದ ಮನೆ ಹಾಗೂ ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯಗಳು ಲಭ್ಯವಾಗುತ್ತಿಲ್ಲ.
ನಾನು ಬಡವ. ಬಿಪಿಎಲ್ ಕಾರ್ಡ್ ಹಾಗೂ ಮನೆ ಒದಗಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಬಿದಿರು, ಸೌದೆಯನ್ನು ಮಾರಾಟ ಮಾಡಿ ಹೇಗೆ ಕುಟುಂಬ ನಿರ್ವಹಣೆ ಮಾಡಲಿ?’ ಎಂದು ಕರ್ಣ ದೆಬರ್ಮಾ ಪ್ರಶ್ನಿಸಿದ್ದಾರೆ.
ರಾಜಕೀಯ ಮುಖಂಡರು ನನ್ನೆಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ಅವರಿಂದ ಯಾವುದೇ ಬೆಂಬಲ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.
ಒಂದೇ ವರ್ಷದಲ್ಲಿ ತ್ರಿಪುರದಲ್ಲಿ ಮಗುವನ್ನು ಮಾರಾಟ ಮಾಡಿದ ಮೂರನೇ ಘಟನೆ ಇದಾಗಿದೆ. ಈ ಹಿಂದೆ ಒಂದು ಮಗುವನ್ನು ₹5000ಕ್ಕೆ, ಮತ್ತೊಂದು ಮಗುವನ್ನು ₹200ಕ್ಕೆ ಮಾರಾಟ ಮಾಡಲಾಗಿತ್ತು.