ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಹಾದಿ ತ್ಯಜಿಸುವಂತೆ ಪ್ರೇರೇಪಿಸಲು ಮನವಿ

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಶ್ರೀನಗರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಶರಣಾಗತಿ ನೀತಿಗೆ ದೊರಕಿರುವ ಸಕಾರಾತ್ಮಕ ಸ್ಪಂದನೆಯಿಂದ ಉತ್ತೇಜಿತರಾಗಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಯೋತ್ಪಾದಕ ಸಂಘಟನೆಗಳನ್ನು ಸೇರಿರುವ ಸ್ಥಳೀಯ ಯುವಕರನ್ನು ಹಿಂಸಾಚಾರ ಹಾದಿಯಿಂದ ವಿಮುಖರನ್ನಾಗಿಸಲು ಅವರ ಕುಟುಂಬಗಳನ್ನು ಸಂಪರ್ಕಿಸುತ್ತಿದ್ದಾರೆ.

ಆಯ್ದುಕೊಂಡಿರುವ ಉಗ್ರವಾದದ ಹಾದಿಯನ್ನು ಬಿಟ್ಟು ಪೊಲೀಸರ ಮುಂದೆ ಶರಣಾಗಲು ಮಕ್ಕಳನ್ನು ಪ್ರೇರೇಪಿಸುವಂತೆ ಪೊಲೀಸರು ಪೋಷಕರಿಗೆ ಮನವಿ ಮಾಡುತ್ತಿದ್ದಾರೆ.

ಈ ಕಾರ್ಯಕ್ರಮದ ಅಡಿಯಲ್ಲಿ ದಕ್ಷಿಣ ಕಾಶ್ಮೀರದ ಡಿಐಜಿ ಸ್ವಯಂ ಪ್ರಕಾಶ್‌ ಪಾಣಿ, ಶೋಪಿಯಾನ್‌ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀರಾಮ್‌ ಅಂಬಾರ್ಕರ್‌ ಅವರು 24ಕ್ಕೂ ಹೆಚ್ಚು ಸ್ಥಳೀಯ ಉಗ್ರರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದಾರೆ ಎಂದು ಪೊಲೀಸ್‌ ವಕ್ತಾರರು ಹೇಳಿದ್ದಾರೆ.

‘ಉಗ್ರ ಸಂಘಟನೆಗಳನ್ನು ಸೇರಿರುವ ತಮ್ಮ ಮಕ್ಕಳಿಗೆ ಶರಣಾಗಲು ಮುಕ್ತವಾದ ಅವಕಾಶ ಇದೆ. ಒಂದು ವೇಳೆ ಅವರು ಹಿಂಸಾಚಾರ ತ್ಯಜಿಸಿದರೆ ಸಭ್ಯ ರೀತಿಯಲ್ಲಿ ಪುನರ್ವಸತಿ ಸೌಲಭ್ಯವನ್ನು ನಾವು ಕಲ್ಪಿಸುತ್ತೇವೆ’ ಎಂಬ ಭರವಸೆಯನ್ನು ಕುಟುಂಬದವರಿಗೆ ನೀಡಿದ್ದಾರೆ.

‘ಡಿಐಜಿ ಅವರು ಪ್ರತಿ ಕುಟುಂಬದೊಂದಿಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ಅಹವಾಲುಗಳನ್ನು ಕೇಳಿದ್ದಾರೆ. ತಮ್ಮ ಪ್ರೀತಿಯ ಮಕ್ಕಳು ಸಾವಿನ ಹಾದಿ ತುಳಿದಿರುವುದಕ್ಕೆ ಕೆಲವು ಉಗ್ರರ ಕುಟುಂಬದ ಸದಸ್ಯರು ಕಣ್ಣೀರು ಹಾಕಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಮೂಲಭೂತವಾದದ ಪರ ಅಭಿಯಾನ ಮತ್ತು ಧಾರ್ಮಿಕ ಬೋಧನೆಯಿಂದಾಗಿ ಶಿಕ್ಷಣವನ್ನು ಅರ್ಧದಲ್ಲೇ ತೊರೆದ ಕಾಲೇಜು ವಿದ್ಯಾರ್ಥಿಗಳು ಉಗ್ರವಾದವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ 185 ಸ್ಥಳೀಯ ಉಗ್ರರು ಸಕ್ರಿಯರಾಗಿದ್ದಾರೆ. ಈ ವರ್ಷ ಇದುವರೆಗೆ 85 ಜನರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.

ಕೌನ್ಸೆಲಿಂಗ್‌ ಅಭಿಯಾನ: ಉಗ್ರರ ಪರವಾಗಿ ನಡೆಯುತ್ತಿರುವ ಅಭಿಯಾನವನ್ನು ಹತ್ತಿಕ್ಕಿ ಯುವ ಜನರು ಭಯೋತ್ಪಾದಕ ಸಂಘಟನೆ ಸೇರುವುದನ್ನು ತಡೆಯುವುದಕ್ಕಾಗಿ ಪೊಲೀಸರು ಆಪ್ತ ಸಮಾಲೋಚನೆ ಅಭಿಯಾನ ಆರಂಭಿಸಿದ್ದಾರೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.

ಇತ್ತೀಚೆಗೆ ನಡೆದ ‌ಎರಡು ಎನ್‌ಕೌಂಟರ್‌ಗಳ ನಂತರ ನಡೆದಿದ್ದ ಆರು ಉಗ್ರರ ಬಂಧನ ಮತ್ತು ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯನ್ನು ಸೇರಿದ್ದ 20 ವರ್ಷದ ಫುಟ್‌ಬಾಲ್‌ ಆಟಗಾರ ಮಜಿದ್‌ ಖಾನ್‌ ಒಂದೇ ವಾರದಲ್ಲಿ ಮತ್ತೆ ಮುಖ್ಯವಾಹಿನಿಗೆ ಮರಳಿರುವುದು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಶರಣಾಗತಿ ನೀತಿಯ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ.

ಮಜೀದ್‌ ಖಾನ್‌ ಹಿಂದಿರುಗಿದ ಬಳಿಕ, ಉಗ್ರ ಸಂಘಟನೆಗಳನ್ನು ತ್ಯಜಿಸುವಂತೆ ಸುಮಾರು ಹತ್ತು ಕುಟುಂಬಗಳು‌ ತಮ್ಮ ಮಕ್ಕಳಿಗೆ ಮನವಿ ಮಾಡಿವೆ.

ಹೊಸ ಶರಣಾಗತಿ ನೀತಿಗೆ ಸಕಾರಾತ್ಮಕ ಸ್ಪಂದನೆ

24 ಉಗ್ರರ ಕುಟುಂಬಗಳನ್ನು ಭೇಟಿಯಾದ ಪೊಲೀಸರ ತಂಡ

ಭಯೋತ್ಪಾದಕರನ್ನು ಮುಖ್ಯವಾಹಿನಿಗೆ ತರಲು ಆಪ್ತಸಮಾಲೋಚನೆ ಅಭಿಯಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT