ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 20 ವರ್ಷ ಜೈಲು

Last Updated 6 ಡಿಸೆಂಬರ್ 2017, 20:20 IST
ಅಕ್ಷರ ಗಾತ್ರ

ಬೆಂಗಳೂರು: 13 ವರ್ಷದ ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡು ಅತ್ಯಾಚಾರ ಎಸಗಿದ್ದ ಅಪರಾಧಿ ಶರವಣ ಎಂಬಾತನಿಗೆ ನಗರದ 71ನೇ ಸಿಟಿ ಸಿವಿಲ್‌ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ಹಾಗೂ‌ ₹55,000 ಸಾವಿರ ದಂಡ ವಿಧಿಸಿದೆ.

2014ರ ಅಕ್ಟೋಬರ್ 14ರಂದು ನಡೆದಿದ್ದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಚಿನ್‌ ಕೌಶಿಕ್‌ ಅವರು ಮಂಗಳವಾರ ಈ ಆದೇಶ ಹೊರಡಿಸಿದ್ದಾರೆ. ಕೃತ್ಯಕ್ಕೆ ಸಹಕರಿಸಿದ್ದ ಎರಡನೇ ಆರೋಪಿ ಚೆಂಡಿಲ್‌ ಕುಮಾರ್‌ ಎಂಬಾತನಿಗೆ 2 ವರ್ಷಗಳ ಸಾದಾ ಶಿಕ್ಷೆ ಹಾಗೂ ₹10,000 ದಂಡ ವಿಧಿಸಲಾಗಿದೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.ಎಸ್‌.ರೇವಣಸಿದ್ದಪ್ಪ ವಾದ ಮಂಡಿಸಿದ್ದರು.

ಪ್ರಕರಣದ ವಿವರ: ‘ಉಲ್ಲಾಳ ಮುಖ್ಯ ರಸ್ತೆಯ ಮುನೇಶ್ವರ ನಗರದ 18ನೇ ಅಡ್ಡರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಚಾಕೊಲೇಟ್‌ ಆಸೆ ತೋರಿಸಿದ್ದ ಚೆಂಡಿಲ್‌ಕುಮಾರ್‌, ಆಕೆಯನ್ನು ತನ್ನ ಬೈಕ್‌ನಲ್ಲಿ ಜ್ಞಾನಗಂಗಾ ನಗರದಲ್ಲಿದ್ದ ಶರವಣ ಮನೆಗೆ ಕರೆದೊಯ್ದಿದ್ದ. ಕೆಲ ನಿಮಿಷದ ಬಳಿಕ ಚೆಂಡಿಲ್‌ಕುಮಾರ್ ಮನೆಯಿಂದ ಹೊರಟುಹೋಗಿದ್ದ. ಶರವಣ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದ’ ಎಂದು ರೇವಣಸಿದ್ದಪ್ಪ ತಿಳಿಸಿದರು.

‘ಕೆಲ ಹೊತ್ತು ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದ ಆತ, ತಿನಿಸು ಹಾಗೂ ₹20 ಕೊಟ್ಟು ಸ್ಕೂಟರ್‌ನಲ್ಲಿ ಮುನೇಶ್ವರ ನಗರದ 18ನೇ ಅಡ್ಡರಸ್ತೆಗೆ ಬಿಟ್ಟು ಹೋಗಿದ್ದ.ಈ ವಿಷಯ ಯಾರಿಗೂ ಹೇಳದಂತೆ ಬೆದರಿಸಿದ್ದ’ ಎಂದರು.

‘ದೇಹದಲ್ಲಿ ಉಂಟಾದ ಬದಲಾವಣೆ ಗಮನಿಸಿದ ಪೋಷಕರು, ಬಾಲಕಿಯನ್ನು ವಿಚಾರಿಸಿದಾಗ ವಿಷಯ ಗೊತ್ತಾಗಿತ್ತು. ಪೋಷಕರು ನೀಡಿದ್ದ ದೂರಿನ
ನ್ವಯ ಅತ್ಯಾಚಾರ (ಐಪಿಸಿ 376) ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಶರವಣ ಹಾಗೂ ಚೆಂಡಿಲ್‌ಕುಮಾರ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಜ್ಞಾನಭಾರತಿ ಉಪವಿಭಾಗದ ಎಸಿಪಿ ಸತ್ಯನಾರಾಯಣ್ ಎನ್‌. ಕುದೂರ್‌, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ವಿವರಿಸಿದರು.

‘ಆರೋಪಿಗಳ ವಿರುದ್ಧ 13 ಮಂದಿ ಸಾಕ್ಷಿ ಹೇಳಿದ್ದರು. 36 ದಾಖಲಾತಿಗಳನ್ನು ನ್ಯಾಯಾಲಯಕ್ಕೆ ನೀಡಿದ್ದೆವು‌’ ಎಂದು ರೇವಣಸಿದ್ದಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT