ಬೆಂಗಳೂರು: ನಗರದಲ್ಲಿ ಸೆರೆ ಸಿಕ್ಕ ಭೂಗತ ಪಾತಕಿ ರವಿಪೂಜಾರಿ ಗ್ಯಾಂಗ್ನ ಶಾರ್ಪ್ ಶೂಟರ್ ತಾಹೀರ್ ಹುಸೇನ್ ಅಲಿಯಾಸ್ ಅನೂಪ್ ಗೌಡನನ್ನು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಬುಧವಾರ ಐದು ತಾಸು ವಿಚಾರಣೆಗೆ ಒಳಪಡಿಸಿದರು.
ಡಿಸಿಪಿ ಎಂ.ಎನ್.ಅನುಚೇತ್ ಅವರು ಆರೋಪಿಯ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು. ಆದರೆ, ಗೌರಿ ಹತ್ಯೆಯಲ್ಲಿ ಈತನ ಪಾತ್ರವಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.
ಹುಸ್ಕೂರು ರಸ್ತೆಯ ಲಾಡ್ಜ್ನಲ್ಲಿ ಅಡಗಿದ್ದ ತಾಹೀರ್ನನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದರು. ಆತನ ಬಳಿ 7.65 ಎಂ.ಎಂನ ನಾಡಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳು ಸಿಕ್ಕಿದ್ದವು. ಗೌರಿ ಹತ್ಯೆಯಲ್ಲೂ ಅದೇ ಮಾದರಿಯ ಪಿಸ್ತೂಲ್ ಬಳಕೆಯಾಗಿತ್ತು. ಈ ಹೋಲಿಕೆಯಿಂದಾಗಿ ಎಸ್ಐಟಿ ತಾಹೀರ್ನನ್ನು ವಿಚಾರಣೆ ನಡೆಸಿದೆ.
‘ಯಲಹಂಕದ ಉದ್ಯಮಿಯೊಬ್ಬರನ್ನು ಕೊಲ್ಲಲು ತಾಹೀರ್ ಯಾರಿಂದಲೋ ಸುಪಾರಿ ಪಡೆದಿದ್ದ. ಆ ವ್ಯಕ್ತಿ ಯಾರೆಂಬುದನ್ನು ತಿಳಿಯಬೇಕಿದೆ. ಎಸ್ಐಟಿ ವಿಚಾರಣೆ ಪೂರ್ಣಗೊಂಡ ಬಳಿಕ, ಖುದ್ದು ಆತನನ್ನು ವಿಚಾರಣೆ ನಡೆಸಲು ನಿರ್ಧರಿಸಿದ್ದೇನೆ’ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಸತೀಶ್ ಕುಮಾರ್ ತಿಳಿಸಿದರು.