ಇಳಕಲ್: ಇಲ್ಲಿಯ ಸಾಂಪ್ರದಾಯಿಕ ಇಳಕಲ್ ಸೀರೆ ನೇಕಾರಿಕೆಗೆ ಪ್ರೋತ್ಸಾಹ ನೀಡಲು ಶೀಘ್ರ ಇಳಕಲ್ ನಗರದಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು’ ಎಂದು ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಭರವಸೆ ನೀಡಿದರು.
ಅವರು ಬುಧವಾರ ನಗರದ ಕಂಠಿ ವೃತ್ತದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಮ್ಮಿಕೊಂಡಿದ್ದ ನೇಕಾರರ ವಸತಿ ಹಾಗೂ ಕಾರ್ಯಾಗಾರ ಯೋಜನೆಯಡಿ ನೀಡಿದ ಸಾಲ ಮತ್ತು ಬಡ್ಡಿ ಮನ್ನಾದ 556 ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ನೂತನ ಜವಳಿ ನೀತಿ ಯೋಜನೆಯಡಿ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ನೇಕಾರರು ರೈತರಂತೆ ಸಂಕಷ್ಟದಲ್ಲಿದ್ದು, ಸಾಲ ಮರುಪಾವತಿ ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದು, ₹58.17 ಕೋಟಿ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡಲು ಸಚಿವೆ ಉಮಾಶ್ರೀ, ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಕೆಎಚ್ಡಿಸಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಅವರು ನನಗೆ ನೆರವು ನೀಡಿದರು. ಮನೆ ಇಲ್ಲದ ನೇಕಾರರಿಗೆ ಇನ್ನಷ್ಟು ಮನೆಗಳನ್ನು ಕಟ್ಟಿಕೊಡಲು ನಿಮ್ಮ ಶಾಸಕರೊಂದಿಗೆ ಸೇರಿ ಮುಖ್ಯಮಂತ್ರಿಯವರ ಗಮನ ಸೆಳೆಯುತ್ತೇವೆ’ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ‘ಬಡವರು ಉಪವಾಸ ಇರಬಾರದು ಎಂದು ಸಿದ್ಧರಾಮಯ್ಯನವರು ಅನ್ಯಭಾಗ್ಯ ಆರಂಭಿಸಿದ್ದು, 2013ರ ಮೇ ತಿಂಗಳಲ್ಲಿ. ಅವತ್ತು ಕೇಂದ್ರದಲ್ಲಿ
ಬಿಜೆಪಿ ಸರ್ಕಾರ ಇರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯೂ ಆಗಿರಿಲಿಲ್ಲ. ಆದರೆ ಯಡಿಯೂರಪ್ಪನವರು ಹೋದಲ್ಲಿ ಬಂದಲ್ಲಿ ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದೂ
ಎಂದು ಸುಳ್ಳು ಹೇಳುವ ಮೂಲಕ ಮಂಕುಬೂದಿ ಎರಚುತ್ತಿದ್ದಾರೆ’ ಎಂದು ದೂರಿದರು.
ಕೇಂದ್ರ ಸರ್ಕಾರವು ಉಜ್ವಲ್ ಯೋಜನೆಯನ್ನು ಗ್ಯಾಸ್ ಏಜೆನ್ಸಿಯವರಿಗೆ ನೆರವಾಗುವ ಉದ್ದೇಶಕ್ಕೆ ಆರಂಭಿಸಿದ್ದರೇ ರಾಜ್ಯದ ಅನಿಲ ಭಾಗ್ಯ ಯೋಜನೆ ಸಂಪೂರ್ಣ ಉಚಿತವಾಗಿದೆ. ಜನಪರವಾಗಿರುವ ಇದೇ ಸರ್ಕಾರವನ್ನು ಮರು ಆಯ್ಕೆ ಮಾಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ‘ಸರ್ವ ಧರ್ಮ, ಜಾತಿಯವರನ್ನು ಸಮಾನತೆಯಿಂದ ಕಾಣುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ದೊರೆಯಲು ಸಾಧ್ಯ’ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ನಗರಸಭೆ ಅಧ್ಯಕ್ಷೆ ವೈಶಾಲಿ ಘಂಟಿ, ಮುಖಂಡರಾದ ಡಾ. ಸುಭಾಸ ಕಾಖಂಡಕಿ, ಅರುಣ ಬಿಜ್ಜಳ, ಸಂಗಣ್ಣ ಓಲೇಕಾರ, ಶಾಂತಕುಮಾರ ಸುರಪುರ ಉಪಸ್ಥಿತರಿದ್ದರು.