ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್‌ ಜಿಹಾದ್? ವ್ಯಕ್ತಿಯ ಜೀವಂತ ದಹನ

ವಿಡಿಯೊದಲ್ಲಿ ಕೃತ್ಯ ಸಮರ್ಥಿಸಿಕೊಂಡ ಆರೋಪಿ
Last Updated 14 ಡಿಸೆಂಬರ್ 2017, 13:37 IST
ಅಕ್ಷರ ಗಾತ್ರ

ಜೈಪುರ: ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಜೀವಂತವಾಗಿ ಸುಟ್ಟ ಅಮಾನವೀಯ ಘಟನೆ ರಾಜಸ್ಮಂಡ್‌ ಜಿಲ್ಲೆಯ ರಾಜ್‌ನಗರದಲ್ಲಿ ಬುಧವಾರ ನಡೆದಿದ್ದು, ಆರೋಪಿ ಶಂಭುನಾಥ್ ರಾಯ್‌ಘರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಲವ್ ಜಿಹಾದ್‌ನಿಂದ ಯುವತಿಯನ್ನು ರಕ್ಷಿಸುವ ಸಲುವಾಗಿ ಕೊಲೆ ಮಾಡಿದ್ದೇನೆ ಎಂದು ಸ್ವತಃ ಆರೋಪಿ ಹೇಳಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಂಭುನಾಥ್ ರಾಯ್‌ಘರ್‌ ಎಂಬಾತ ಮೊಹಮ್ಮದ್ ಅಫ್ರಾಜುಲ್ ಎಂಬುವವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಸೀಮೆಎಣ್ಣೆ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದಾನೆ. ಇದೆಲ್ಲಾ ವಿಡಿಯೊದಲ್ಲಿ ಸೆರೆಯಾಗಿದೆ.

‘ಲವ್‌ ಜಿಹಾದ್‌ನಿಂದ ಯುವತಿಯನ್ನು ಕಾಪಾಡುವ ಸಲುವಾಗಿ ಈತನನ್ನು ಸುಟ್ಟಿದ್ದೇನೆ ಎಂದು ತಾನು ಮಾಡಿರುವ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಶಂಭುನಾಥ್, ಯಾರು ಲವ್ ಜಿಹಾದ್‌ಗೆ ಯತ್ನಿಸುತ್ತಾರೋ ಅವರಿಗೆಲ್ಲಾ ಇದೇ ಶಿಕ್ಷೆ ಕಾದಿದೆ ಎಂದು ಹೇಳಿರುವ ಮಾತುಗಳು ಸೆರೆಯಾಗಿರುವುದು ವಿಡಿಯೊದಲ್ಲಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ನಂತರ ರಾಜಸ್ಮಂಡ್‌ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಸ್ಥಳ ಪರಿಶೀಲನೆ ವೇಳೆ ಅರ್ಧ ಬೆಂದ ಮೃತದೇಹ, ಹತ್ಯೆಗೆ ಬಳಸಿದ ಕೃಷಿ ಉಪಕರಣಗಳು, ದ್ವಿಚಕ್ರ ವಾಹನ, ಚಪ್ಪಲಿಗಳು ದೊರೆತಿವೆ. ಅಲ್ಲದೇ ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಐಜಿ ಆನಂದ್ ಶ್ರೀವಾತ್ಸವ ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ತಾನದ ಗೃಹ ಸಚಿವ ಗುಲಾಬ್‌ ಚಂದ್ ಕಟಾರಿಯಾ, ‘ಇದೊಂದು ಆಘಾತಕಾರಿ ಘಟನೆ. ಈ ದುಷ್ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ. ವಿಶೇಷ ತನಿಖಾ ತಂಡ ಆರೋಪಿಯ ವಿಚಾರಣೆ ನಡೆಸುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT