ಯಾದಗಿರಿ: ಸರ್ಕಾರಿ ಶಾಲೆಯ ಆ ಮಕ್ಕಳು ತಾರಾಲಯ ವೀಕ್ಷಿಸಲು ಕಾದು ಕುಳಿತಿದ್ದರು. ಶಾಲೆಯ ಕೋಣೆ ಯೊಂದರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಿಬ್ಬಂದಿ ತಾರಾಲಯ ವೀಕ್ಷಣೆಗೆ ಸಿದ್ಧತೆ ನಡೆಸಿದ್ದರು. ನಿಗದಿತ ಸಮಯಕ್ಕೆ ಬಂದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ತಾರಾಲಯ ವೀಕ್ಷಣೆಗೆ ಮಕ್ಕಳೊಂದಿಗೆ ಒಳ ಹೊಕ್ಕರು. ಆದರೆ, ತಾಂತ್ರಿಕ ದೋಷದಿಂದಾಗಿ ಜಿಲ್ಲಾಧಿಕಾರಿ ಮಕ್ಕಳೊಂದಿಗೆ ತಾರಾಲಯ ವೀಕ್ಷಿಸುವ ಭಾಗ್ಯ ಸಿಗಲಿಲ್ಲ.
ಅರ್ಧ ಗಂಟೆ ಕಾದು ಕುಳಿತ ಅವರು ನಂತರ ಅನ್ಯ ಕಾರ್ಯನಿಮಿತ್ತ ನಿರ್ಗಮಿಸಿದರು.
ಜಿಲ್ಲಾಧಿಕಾರಿ ಹೊರಟ ನಂತರ ಶಾಲಾ ಮಕ್ಕಳು, ಶಿಕ್ಷಕರು ತಾರಾಲಯ ವೀಕ್ಷಣೆಯ ಅದಮ್ಯ ಆಸೆ ಹೊತ್ತು ನಿಂತಿದ್ದರು. ಬೆಳಿಗ್ಗೆಯಿಂದಕಾದರೂ ತಾಂತ್ರಿಕದೋಷ ಸರಿಪಡಿಸುವುದರಲ್ಲೇ ಸಿಬ್ಬಂದಿ ಕಾಲಹರಣ ಮಾಡಿದರು. ಕೊನೆಗೂ ತಾರಾಲಯ ವೀಕ್ಷಣೆಗೆ ಸಿಗದಿದ್ದಾಗ ಶಿಕ್ಷಕರು, ವಿದ್ಯಾರ್ಥಿಗಳು ನಿರಾಶೆ ಅನುಭವಿಸುವಂತಾಯಿತು.
ಜಿಲ್ಲೆಯಲ್ಲಿ 28 ದಿನ ವೀಕ್ಷಣೆಗೆ ಅವಕಾಶ: ಸಂಚಾರಿ ತಾರಾಲಯ ಜಿಲ್ಲೆಯಲ್ಲಿ ಒಟ್ಟು 28 ದಿನವೀಕ್ಷಣೆಗೆ ಸಿಗಲಿದೆ. ಕೇವಲ ಸರ್ಕಾರಿ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಯಾದಗಿರಿ ನಗರದಲ್ಲಿ ಡಿ.6ರಿಂದ ಡಿ.21ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಡಿ.21ರ ನಂತರ ಗುರುಮಠಕಲ್ ನಲ್ಲಿ ಎರಡು ದಿನ, ಸುರಪುರದಲ್ಲಿ ಎರಡು ದಿನ
ಹಾಗೂ ಶಹಾಪುರದಲ್ಲಿ ಮೂರು ದಿನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಿಬ್ಬಂದಿ ವೀರೇಶ್ ತಿಳಿಸಿದರು.
ತಾರಾಲಯದ ಖರ್ಚು ವೆಚ್ಚವನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಭರಿಸಲಿದೆ ಎಂದೂ ಅವರು ತಿಳಿಸಿದರು.
***
ಸಾಫ್ಟ್ವೇರ್ ಲೈಸನ್ಸ್ ನಾಶ: ವೀರೇಶ್
‘ತಾರಾಲಯ ಇಟಲಿ ದೇಶದ ತಂತ್ರಜ್ಞಾನ ಹೊಂದಿರುವ ಸಾಫ್ಟ್ವೇರ್ ಹೊಂದಿದೆ. ಬುಧವಾರ ಅದರ ಲೈಸನ್ಸ್ ನಾಶಗೊಂಡಿದೆ. ಲೈಸನ್ಸ್ ಪಡೆಯಲು ಇಟಲಿ ದೇಶದ ಸಾಫ್ಟ್ವೇರ್ ಎಂಜಿನಿಯರ್ ಅವರನ್ನು ಸಂಪರ್ಕಿಸಲಾಗಿದೆ. ರಾಜ್ಯದ ಎಲ್ಲಾ ಸಂಚಾರಿ ತಾರಾಲಯಗಳಲ್ಲೂ ಇಂದು ಈ ಸಮಸ್ಯೆ ಕಾಣಿಸಿಕೊಂಡಿದೆ’ ಎಂದು ತಾಂತ್ರಿಕ ಸಿಬ್ಬಂದಿ ವೀರೇಶ್ ತಿಳಿಸಿದರು.