ಸುರಪುರ: ‘ಶರಣರು ಮತ್ತು ಸೂಫಿಗಳ ಸಂದೇಶದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲರೂ ಮಾನವ ಕಲ್ಯಾಣವನ್ನೇ ಬಯಸಿದರು. ಜಾತೀಯತೆ ಮತ್ತು ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದರು. ಅವರ ಬದುಕು ನಮಗೆ ಆದರ್ಶ’ ಎಂದು ಸಾಹಿತಿ ನಬಿಲಾಲ ಮಕಾಂದಾರ ಹೇಳಿದರು.
ರಂಗಂಪೇಟೆಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಬುಧವಾರ ಬಸವಪ್ರಿಯ ಲಿಂಗಾಯತ ಸಮಿತಿ ಹಮ್ಮಿಕೊಂಡಿದ್ದ ಅಲ್ಲಮಾದಿ ಶರಣರ ಅರಿವು ಅನುಭಾವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಂತಪ್ಪ ಬೂದಿಹಾಳ ಮಾತನಾಡಿ, ‘ಈ ಹಿಂದೆ ಸಾಹಿತ್ಯ ಕೇವಲ ಕೆಲವರ ಸ್ವತ್ತಾಗಿತ್ತು. ಸಾಮಾನ್ಯರಿಗೆ ತಿಳಿಯುತ್ತಿರಲಿಲ್ಲ. ಬಸವಾದಿ ಶರಣರ ವಚನಗಳಿಂದ ಜನರಿಗೆ ಸಾಹಿತ್ಯದ ಅರಿವು ಮೂಡಿತು’ ಎಂದರು.
ಮಹಾದೇವಪ್ಪ ಗಾಳೆನೋರ ವಚನ ಗಾಯನ ಮಾಡಿದರು. ಮಲ್ಲಿಕಾರ್ಜುನ ಸತ್ಯಂಪೇಟೆ, ಬಾಲಯ್ಯ ಶರಣ ಮಂಗಳೂರ, ಮುನ್ನಸಾಬ ಅಮ್ಮಾಪುರ, ಜಟ್ಟೆಪ್ಪ ಕಟ್ಟಿಮನಿ,
ಪ್ರಕಾಶ ಅಲಬನೂರ, ಮುರಳಿಧರ ಗೌಡ, ನಿಂಗಪ್ಪ, ನಿಂಗಣ್ಣ ಬುಡ್ಡ, ರಾಮುಲು ವಳಕೇರಾ, ಶಿವಲೀಲಾ ಪುರತಗೇರಿ, ಸಿದ್ದಮ್ಮ ಚಿಂತಿ, ಸೂಗಮ್ಮ, ಪದ್ಮಾ ನಾಲವಾರ ಇದ್ದರು.