ಸಿಂದಗಿ: ವೀರಶೈವ ಎಂಬುದು ಒಳಪಂಗಡ. ಲಿಂಗಾಯತ ಇದು ಕಾನೂನಾತ್ಮಕವಾದುದು. ಸಂವಿಧಾನಬದ್ಧ ಮಾನ್ಯತೆಗೆ ವೀರಶೈವ ಪದದಿಂದ ಕಾನೂನು ತೊಡಕು ಉಂಟಾಗುತ್ತದೆ. ಅಂತೆಯೇ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಡಿ.10 ರಂದು ವಿಜಯಪುರದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳುರ ಹೇಳಿದರು.
‘ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಹಾಗೂ ಎಸ್.ಎಂ.ಜಾಮದಾರ ನೇತೃತ್ವದಲ್ಲಿ ಡಿ. 8 ರಂದು ಮಧ್ಯಾಹ್ನ 12ಕ್ಕೆ ನಗರದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಬಸವಣ್ಣನವರ ಕನಸು ಒಂದು ಜಾತಿಗೆ ಸೀಮಿತವಾದ ಧರ್ಮವಲ್ಲ. ಅದು ಹಲವಾರು ಒಳಪಂಗಡಗಳನ್ನೊಳಗೊಂಡ ಲಿಂಗಾಯತ ಧರ್ಮವಾಗಿದೆ. ದಲಿತರು ಈ ಧರ್ಮದ ಒಳ ಪಂಗಡದಲ್ಲಿ ಬರುತ್ತಾರೆ. ಹಾಗೇ ಲಿಂಗಾಯತ ಕಬ್ಬಲಿಗ ಕೂಡ ಬರುತ್ತಾರೆ. ಆದರೆ ಲಿಂಗಾಯತರೆಲ್ಲ ಬೇಡ ಎನ್ನುವ ಕಬ್ಬಲಿಗ ಸಮುದಾಯವರಿಗೆ ಸಮಗ್ರ ಮಾಹಿತಿ ಕೊರತೆ ಇದೆ’ ಎಂದು ಅವರು ತಿಳಿಸಿದರು.