ಹುಣಸೂರು/ಬಿಳಿಕೆರೆ: ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ಕಪ್ಪುಸ್ಥಳ (ಅಪಘಾತ ಸ್ಥಳ)ಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹ 4 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಬಿಳಿಕೆರೆ ಸಮೀಪ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮೈಸೂರಿ ನಿಂದ ಚಿಲ್ಕುಂದವರೆಗೆ ಹಲವು ಅಪಘಾತ ಸ್ಥಳ ಗುರುತಿಸಲಾಗಿದೆ. ಮಲ್ಲಿನಾಥಪುರ ಬಳಿಯ ಕೆ.ಆರ್.ನಗರ ತಿರುವು ಕೂಡ ಕಪ್ಪುಸ್ಥಳ ಪಟ್ಟಿಗೆ ಸೇರಿದೆ. ಇಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ವಿಸ್ತರಣೆಯಿಂದ ಅವುಗಳ ನಿಯಂತ್ರಣ ಸಾಧ್ಯ ಎಂಬ ತೀರ್ಮಾನ ತೆಗೆದುಕೊಂಡಿದೆ ಎಂದರು.
ತಾಲ್ಲೂಕಿನ ಬಿಳಿಕೆರೆ ಬೈಪಾಸ್, ಚಿಲ್ಕುಂದ, ಯಶೋದಪುರ ಬಳಿಯೂ ಅಪಘಾತ ಸ್ಥಳ ಗುರುತಿಸಲಾಗಿದೆ. ಕಪ್ಪುಸ್ಥಳಗಳಲ್ಲಿ ರಬ್ಬರ್ ರೋಡ್ ಹಂಪ್, ರಸ್ತೆ ವಿಭಜಕ ರಿಫ್ಲೆಕ್ಟರ್, ಸೂಚನ ಫಲಕ ಅಳವಡಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಮೂರು ವರ್ಷದ ಹಿಂದೆ 3,500 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 13 ಸಾವಿರ ಕಿ.ಮೀ ರಸ್ತೆ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಾಗುವ ಕಪ್ಪು ಸ್ಥಳಗಳಿಗೆ ಇಲಾಖೆ ಸೂಕ್ತ ಪರಿಹಾರ ಕಾಮಗಾರಿ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರ ಗಳೇ ಹೊಣೆಯಾಗಲಿದ್ದಾರೆ ಎಂದರು.
ವಿದ್ಯುತ್ ಸರಬರಾಜು ಆಧುನೀ ಕರಣ ಕಾಮಗಾರಿಗಾಗಿ ಹುಣಸೂರಿಗೆ ₹ 6 ಕೋಟಿ, ಗ್ರಾಮಾಂತರ ಪ್ರದೇಶಕ್ಕೆ ₹ 8 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಈಗಾಗಲೇ ಕಾಮಗಾರಿ ಪ್ರಗತಿ ಯಲ್ಲಿದೆ ಎಂದು ಹೇಳಿದರು.
ಆಸ್ಪತ್ರೆಗೆ ಭೇಟಿ: ನಂತರ ಬಿಳಿಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂಸದರು, ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ವ್ಯೆದ್ಯರ ಕೊರತೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂಬಂಧವಾಗಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಅಪಘಾತದಿಂದ ಕಾಲು ಊನ ವಾಗಿದ್ದ ಯುವಕನಿಗೆ ಮೈಸೂರಿನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚಿಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಯೋಗಾನಂದಕುಮಾರ್, ಗ್ರಾ.ಪಂ ಅಧ್ಯಕ್ಷೆ ಶಾಂತಮ್ಮ, ಪಿಡಿಒ ಭವ್ಯಾ, ಮುಖಂಡರು ಹಾಜರಿದ್ದರು.