ಉಜಿರೆ: ಕೊಲ್ಲಾಪುರದಲ್ಲಿ ಚಾತುರ್ಮಾಸ್ಯ ವ್ರತ ಪೂರೈಸಿದ ಮುನಿಗಳ ಸಂಘದವರು ಬುಧವಾರ ಪಡಂಗಡಿ ಬಸದಿಯಿಂದ ಹೊರಟು ಬೆಳ್ತಂಗಡಿಯಲ್ಲಿ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ದೇವರ ದರ್ಶನ ಪಡೆದರು.
ಸಂತ ಶಿರೋಮಣಿ ಬಾಹುಬಲಿ ಮಹಾರಾಜರ ಶಿಷ್ಯರಾದ ಆಚಾರ್ಯ 108 ಜಿನಸೇನ ಮುನಿಮಹಾರಾಜ್, 108 ಕುಲಭೂಷಣ ಮಹಾರಾಜ್, 105 ಕ್ಷುಲ್ಲಕ ಗುಲಾಬಸೇನ ಮಹಾರಾಜ್ ಹಾಗೂ ಮಾತಾಜಿಗಳಾದ ಆರ್ಯಿಕಾ ಮುಕ್ತಿಲಕ್ಷ್ಮಿ ಮಾತಾಜಿ, ಆರ್ಯಿಕಾ ನಿರ್ವಾಣಮತಿ ಮಾತಾಜಿ ಮತ್ತು ಆರ್ಯಿಕಾ ಸುಪ್ರಮತಿ ಮಾತಾಜಿ ಈ ತಂಡದಲ್ಲಿದ್ದರು.
ಉಜಿರೆಯ ಶಿವಾಜಿನಗರಕ್ಕೆ ಬಂದಿದ್ದ ಮುನಿಗಳನ್ನು ಗುಣಪಾಲ ಬಂಗ ಮತ್ತು ಪ್ರೇಮಾ, ಸುರೇಶ್ ಜೈನ್, ಡಾ.ಜಯಮಾಲಾ, ರೋಹಿಣಿ, ಕುಶಲಾ ಮೊದಲಾದ ಶ್ರಾವಕ - ಶ್ರಾವಕಿಯರು ಶ್ರದ್ಧಾ - ಭಕ್ತಿಯಿಂದ ಸ್ವಾಗತಿಸಿದರು.
ಆಹಾರ ದಾನ ನೀಡಲಾಯಿತು. ಪಾದಪೂಜೆ ಬಳಿಕ ಮುನಿಗಳು ಧರ್ಮಸ್ಥಳಕ್ಕೆ ವಿಹಾರ ಮಾಡಿದರು. ಧರ್ಮಸ್ಥಳದಿಂದ ಮುಂದೆ ಹಾಸನದ ಮೂಲಕ ಮುನಿಸಂಘದವರು ಶ್ರವಣಬೆಳಗೊಳಕ್ಕೆ ವಿಹಾರ ಮಾಡಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿ ಸಲಿದ್ದಾರೆ.