ಬೆಂಗಳೂರು: ಬರಿದಾಗಿರುವ ಸರ್ಕಾರದ ಬೊಕ್ಕಸ ತುಂಬಿಸಲು ಸಿದ್ದರಾಮಯ್ಯ ಸರ್ಕಾರ ಕುಡುಕರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
₹ 10 ಬೆಲೆಯ ಮದ್ಯಕ್ಕೆ ₹ 70 ಬೆಲೆ ಇಟ್ಟು ಸರ್ಕಾರ ಮಾರುತ್ತಿದೆ. ಮದ್ಯ ಸೇವಿಸುವ ಬಡಪಾಯಿಗಳ ಮೇಲೆ ಬೇಕಾ ಬಿಟ್ಟಿ ತೆರಿಗೆ ಹಾಕುವ ಮೂಲಕ ಪಿಕ್ ಪಾಕೆಟ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ದೂರಿದರು.
ನಾಲ್ಕು ವರ್ಷಗಳಲ್ಲಿ ಸರ್ಕಾರ ₹1.28 ಲಕ್ಷ ಕೋಟಿ ಸಾಲ ಮಾಡಿದೆ. ಈಗ ಚುನಾವಣಾ ಪ್ರಚಾರಕ್ಕೆ ಹೊರಟಿರುವ ಸರ್ಕಾರ ಕಾರ್ಯಕ್ರಮಗಳ ಆಯೋಜನೆಗೆ ಜಿಲ್ಲಾಡಳಿತದಿಂದ ನೂರಾರು ಕೋಟಿ ಟೆಂಡರ್ ಕರೆದಿದೆ. ಇಂತಹ ಘಟನೆ ದೇಶದಲ್ಲೇ ನಡೆದಿಲ್ಲ ಎಂದು ಅವರು ತಿಳಿಸಿದರು.
ವರ್ಷಕ್ಕೆ ₹ 500 ಕೋಟಿಗೂ ಹೆಚ್ಚು ಹಣ ಜಾಹಿರಾತಿಗೆ ಖರ್ಚು ಮಾಡುತ್ತಿದ್ದಾರೆ. ಜಾಹಿರಾತು ಕೊಟ್ಟು ಮಾಧ್ಯಮಗಳನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಚುನಾವಣೆ ಹತ್ತಿರ ಬಂದಿರುವಾಗ ಮುಖ್ಯಮಂತ್ರಿಯವರಿಗೆ ಉತ್ತರ ಕನ್ನಡದ ನೆನಪಾಗಿದೆ. ನಾಲ್ಕೂವರೆ ವರ್ಷಗಳ ಬಳಿಕ ಭಟ್ಕಳದಲ್ಲಿ ₹ 1500 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎಂದರು.