ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡದಿಂದ ತಳ್ಳಿ ಡಿಜಿಪಿ ಕಚೇರಿ ನೌಕರನ ಹತ್ಯೆ

ಆರೋಗ್ಯ ಇಲಾಖೆ ನೌಕರನ ಬಂಧನ
Last Updated 7 ಡಿಸೆಂಬರ್ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ನಂದಿನಿ ಲೇಔಟ್ ಸಮೀಪದ ಕೃಷ್ಣಾನಂದನಗರದ ಪೊಲೀಸ್ ವಸತಿ ಸಮುಚ್ಚಯದಲ್ಲಿ ಬುಧವಾರ ರಾತ್ರಿ ಸರ್ಕಾರಿ ನೌಕರರ ನಡುವೆ ನಡೆದ ಜಗಳ, ಡಿಜಿಪಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಉದಯ್‌ಕುಮಾರ್ (34) ಅವರ ಕೊಲೆಯಲ್ಲಿ ಅಂತ್ಯಕಂಡಿದೆ.

ಹತ್ಯೆ ಸಂಬಂಧ ಪೊಲೀಸರು ಆರೋಗ್ಯ ಇಲಾಖೆ ನೌಕರ ರಾಜು ಕಡಕೋಳ (36) ಎಂಬಾತನನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಜಗಳ ನಡೆದಿದ್ದು, ಆರೋಪಿಯು ಉದಯ್ ಅವರನ್ನು ಕಟ್ಟಡದಿಂದ ತಳ್ಳಿ ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅನುಕಂಪದಿಂದ ಕೆಲಸ: ಉದಯ್ ಮಂಡ್ಯ ಜಿಲ್ಲೆಯವರು. ಅವರ ಪತ್ನಿ ಗೌರಮ್ಮ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದಾರೆ. ನೆಲಮಂಗಲದಲ್ಲಿ ಎಎಸ್‌ಐ ಆಗಿದ್ದ ತಂದೆ, ಎರಡು ವರ್ಷಗಳ ಹಿಂದೆ ಕರ್ತವ್ಯದ ವೇಳೆಯಲ್ಲೇ ಕೊನೆಯುಸಿರೆಳೆದಿದ್ದರು. ಹೀಗಾಗಿ, ಅನುಕಂಪದ ಆಧಾರದ ಮೇಲೆ ಐದು ತಿಂಗಳ ಹಿಂದೆ ಉದಯ್ ಅವರಿಗೆ ಡಿಜಿಪಿ ಕಚೇರಿಯಲ್ಲಿ ಕೆಲಸ ಸಿಕ್ಕಿತ್ತು.

(ರಾಜು)

ಕಚೇರಿಯಲ್ಲಿ ಅವರಿಗೆ ವಿಠ್ಠಲ್ ಲೋಕಪುರ್ (ಕಚೇರಿ ಸಹಾಯಕ) ಎಂಬುವರ ಪರಿಚಯವಾಯಿತು. ವಿಠ್ಠಲ್ ಮೂಲಕವೇ ರಾಜು ಕಡಕೋಳ ಜತೆಯೂ ಸ್ನೇಹ ಬೆಳೆದಿತ್ತು. ಈ ಆತ್ಮೀಯತೆ ನಂತರ ಮೂವರೂ ಒಂದೇ ಮನೆಯಲ್ಲಿ ನೆಲೆಸಲು ನಿರ್ಧರಿಸಿದ್ದರು.

ಹೀಗಿರುವಾಗ ಇಲಾಖೆಯು ಉದಯ್ ಅವರಿಗೆ ಕೃಷ್ಣಾನಂದನಗರದಲ್ಲಿರುವ ವಸತಿ ಸಮುಚ್ಚಯದ ‘ಬಿ’ ಬ್ಲಾಕ್‌ನಲ್ಲಿ 15ನೇ ಸಂಖ್ಯೆಯ ಮನೆಯನ್ನು ನೀಡಿತು. ಪತ್ನಿ–ಮಕ್ಕಳು ಮದ್ದೂರಿನಲ್ಲೇ ನೆಲೆಸಿದ್ದರಿಂದ, ತನ್ನಿಬ್ಬರು ಗೆಳೆಯರನ್ನು ಈ ಮನೆಯಲ್ಲಿ ಉಳಿಸಿಕೊಳ್ಳಲು ಉದಯ್ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡಿದ್ದರು. ನಂತರ ವಿಠ್ಠಲ್, ಅಡುಗೆ ಕೆಲಸಕ್ಕೆ ವಿಜಯಪುರದ ಮಹಿಳೆಯೊಬ್ಬರನ್ನು ಕರೆತಂದಿದ್ದರು.

ಹೀಗೆ ಒಂದು ಕಡೆ ನೆಲೆನಿಂತ ಸ್ನೇಹಿತರು, ವಾರದಲ್ಲಿ ಒಂದೆರಡು ದಿನ ಮನೆಯಲ್ಲೇ ಪಾರ್ಟಿ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ರಾಜು ಹಾಗೂ ಉದಯ್ ನಡುವೆ ಹಣಕಾಸಿನ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು.

ಬುಧವಾರ ರಾತ್ರಿ ಪಾರ್ಟಿ ವೇಳೆ ಅದೇ ವಿಚಾರವಾಗಿ ಪರಸ್ಪರರ ನಡುವೆ ಗಲಾಟೆ ಶುರುವಾಗಿದೆ. ವಾಗ್ವಾದ ಜೋರಾಗಿ ಪರಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ವಿಠ್ಠಲ್ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾರೆ. ಈ ಹಂತದಲ್ಲಿ ರಾಜು, ಕುತ್ತಿಗೆಗೆ ಕೈ ಹಾಕಿ ಬಲವಾಗಿ ತಳ್ಳಿದ್ದರಿಂದ ಉದಯ್ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ.

ಸಮುಚ್ಚಯದ ನಿವಾಸಿಗಳು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಮೃತರ ಪತ್ನಿ ಗೌರಮ್ಮ ಕೊಟ್ಟ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

(ಉದಯ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT