ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಆಗ್ರಹ

ಬೈಲಹೊಂಗಲ: ‘ಗೋವುಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ದೇಶದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಹಕ್ಕೊತ್ತಾಯ ಮಂಡಿಸಬೇಕು’ ಎಂದು ಬೈಲಹೊಂಗಲ ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಆಗ್ರಹಿಸಿದರು.
ಗೋಕರ್ಣ ರಾಮಚಂದ್ರಾಪುರ ಮಠದ ಭಾರತೀಯ ಗೋ ಪರಿವಾರದಿಂದ ಕೈಗೊಂಡಿರುವ ಗೋಸಂರಕ್ಷಣೆ ಹಕ್ಕೊತ್ತಾಯ ಕುರಿತು ಸಹಿ ಸಂಗ್ರಹ ಅಭಿಯಾನಕ್ಕೆ ಇಲ್ಲಿನ ಮಠದ ಆವರಣದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಗೋ ಮಾತೆಗೆ ಬಹಳ ವಿಶೇಷ ಸ್ಥಾನವಿದೆ. ಈ ನಿಟ್ಟಿನಲ್ಲಿ ಗೋಕರ್ಣ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಸುತ್ತಿರುವ ಅಭಿಯಾನ ಅಭಿನಂದನಾರ್ಹ’ ಎಂದರು.
‘ಗೋಹತ್ಯೆ ನಿಷೇಧ ಮತ್ತು ಭಾರತೀಯ ಗೋತಳಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಐದು ಕೋಟಿ ಕನ್ನಡಿಗರು ಹಕ್ಕೊತ್ತಾಯ ಮಂಡಿಸುವ ಅಭಿಯಾನಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಹಿ ಮಾಡಿ ಗೋ ಸಂರಕ್ಷಣೆ ಸಂದೇಶವನ್ನು ದೇಶದೆಲ್ಲೆಡೆ ಸಾರಬೇಕು’ ಎಂದು ಕರೆ ನೀಡಿದರು.
‘ರಾಜ್ಯದಾದ್ಯಂತ ಸಹಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಡಿ. 16ಕ್ಕೆ ಬೆಳಗಾವಿ ಜಿಲ್ಲೆಗೆ ಯಾತ್ರೆ ಆಗಮಿಸಲಿದೆ. ಭವ್ಯ ಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಗೋವು ಉತ್ಪನ್ನಗಳ ಉದ್ಯಮದ ರಾಜ್ಯ ಘಟಕ ಅಧ್ಯಕ್ಷ ಬಾಬಾಬುರಾವ ಪಾಟೀಲ ಹೇಳಿದರು.
ಗೋವು ಪರಿವಾರದ ಜಿಲ್ಲಾ ಘಟಕ ಉಪಾಧ್ಯಕ್ಷ ಪ್ರಹ್ಲಾದ ದೇವರಹುಬ್ಬಳ್ಳಿ, ಡಾ.ಸಿ.ಬಿ. ಗಣಾಚಾರಿ, ತಾಲ್ಲೂಕು ಘಟಕ ಅಧ್ಯಕ್ಷ ಸುಭಾಸ ತುರಮರಿ, ಉಪಾಧ್ಯಕ್ಷ ರವಿ ಹುಲಕುಂದ, ಮುಖಂಡರಾದ ಮಲ್ಲಿಕಾರ್ಜುನ ವಕ್ಕುಂದಮಠ, ಬಸವರಾಜ ದೊಡಮನಿ, ಬಸವರಾಜ ಈಟಿ, ವಿಶ್ವನಾಥ ಚಂಡುಕರ, ಬಸವರಾಜ ಗಂಗಪ್ಪನವರ ಇದ್ದರು. ಎಸ್.ಜಿ.ವಿ. ವಿದ್ಯಾವರ್ದಕ ಶಿಕ್ಷಣ ಸಂಸ್ಥೆ, ಗಣಾಚಾರಿ ಶಿಕ್ಷಣ ಸಂಸ್ಥೆಗೆ ತೆರಳಿ ವಿದ್ಯಾರ್ಥಿಗಳ ಸಹಿ ಸಂಗ್ರಹಿಸಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.