ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 10–12–1967

Last Updated 9 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮಹಾಜನ್ ವರದಿ ಚವಾಣರ ಅಧಿಕಾರ ವ್ಯಾಪ್ತಿಯಿಂದ ದೂರವಿರಲೆಂದು ಒತ್ತಾಯ

ಬೆಂಗಳೂರು, ಡಿ. 9– ಶ್ರೀ. ವೈ.ಬಿ. ಚವಾಣ್‌ರವರು ಮಹಾಜನ್ ಆಯೋಗದ ವರದಿಯ ಬಗ್ಗೆ ಕೇಂದ್ರದ ಗೃಹ ಸಚಿವರಾಗಿ ವ್ಯವಹರಿಸದಂತೆ ತಡೆಯಬೇಕೆಂದು ಸ್ವತಂತ್ರ ಸದಸ್ಯ ಶ್ರೀ ಜೆ.ಬಿ. ಮಲ್ಲಾರಾಧ್ಯ ಅವರು ಪ್ರಧಾನಮಂತ್ರಿಯನ್ನು ಇಂದು ಒತ್ತಾಯಪಡಿಸಿದರು.

ಶ್ರೀ ಚವಾಣ್‌ರವರು ಗೃಹಮಂತ್ರಿಯಾಗಿ ಮೈಸೂರು–ಮಹಾರಾಷ್ಟ್ರ–ಕೇರಳ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ತಮ್ಮ ಅಧಿಕಾರವನ್ನು ನಿರ್ವಹಿಸಿದರೆ ‘ನಮಗೆ ನ್ಯಾಯ ದೊರೆಯುವುದಿಲ್ಲ’ ಎಂದು ಶ್ರೀ ಮಲ್ಲಾರಾಧ್ಯರು ಶಂಕಿಸಿದರು.

**

ಭಾರತದಲ್ಲೊಂದು ಬರ್ಲಿನ್!

ಬೆಂಗಳೂರು, ಡಿ. 9– ಬೆಳಗಾವಿಯನ್ನು ಬರ್ಲಿನ್‌ನಂತೆ ವಿಭಜಿಸಿ ಮೈಸೂರು ಮತ್ತು ಮಹಾರಾಷ್ಟ್ರ ಸಮವಾಗಿ ಹಂಚಿಕೊಳ್ಳಬೇಕೆಂದು ಮಹಾರಾಷ್ಟ್ರದ ನಾಯಕರು ಸಲಹೆ ಮಾಡಿರುವರಂತೆ!

ಇಂದು ವಿಧಾನ ಪರಿಷತ್ತಿನಲ್ಲಿ ಮಹಾಜನ್ ಆಯೋಗದ ಚರ್ಚೆಯಲ್ಲಿ ಭಾಗವಹಿಸಿದ್ದ ಶ್ರೀ ಜೆ.ಬಿ. ಮಲ್ಲಾರಾಧ್ಯರವರು ಮಹಾರಾಷ್ಟ್ರದ ನಾಯಕರು ಈ ರೀತಿ ಸಲಹೆ ಮಾಡಿರುವರೆಂದು ತಮಗೆ ಗೊತ್ತಾಗಿದೆ ಎಂದರು.

‘ಬೆಳಗಾವಿಯು ಮಹಾರಾಷ್ಟ್ರೀಯರಿಗೆ ಸಾವು–‍ಬದುಕಿನ ಪ್ರಶ್ನೆಯಾಗಿರುವಂತೆ ಕಂಡು ಬರುತ್ತದೆ’ ಎಂದ ಮಲ್ಲಾರಾಧ್ಯರು ಈ ‘ಸಲಹೆಯನ್ನು’ ಮಾಡಿರುವುದು ‘ಅತಿ ವಕ್ರವಾದ ವಾದ’ ಎಂದು ಟೀಕಿಸಿದರು.

**

ಮದ್ರಾಸ್ ರಾಜ್ಯದಲ್ಲಿ ಭಾರಿ ಮಳೆ ಹಾವಳಿ

ಮದ್ರಾಸ್‌, ಡಿ. 9– ಎರಡು ದಿನ ಬಿದ್ದ ಭಾರಿ ಮಳೆಗೆ ಸಿಕ್ಕಿ ಮದ್ರಾಸ್ ರಾಜ್ಯದ ತೀರದ ಜಿಲ್ಲೆಗಳಲ್ಲಿ 7 ಮಂದಿ ಮರಣ ಹೊಂದಿದರಲ್ಲದೆ, ಹತ್ತಾರು ಸಾವಿರ ಮಂದಿ ನಿರ್ವಸಿತರಾದರು.

ಅಧಿಕ ಮಳೆ ದೆಸೆಯಿಂದ ಕಾಂಚೀಪುರ ಒಂದರಲ್ಲೇ ಮನೆ ಕುಸಿದು ಕುಟುಂಬದ ನಾಲ್ವರು ಸಾವಿಗೀಡಾದರು.

**

ಸೂರ್ಯ ಕಾಣದ ಎರಡನೇ ದಿನ

ಬೆಂಗಳೂರು, ಡಿ. 9– ಸೂರ್ಯ ಕಾಣದ ಎರಡನೆಯ ದಿನ. ನಗರದ ಜನ ದಿನವೆಲ್ಲ ಛತ್ರಿ ಹಿಡಿದು ನಡೆದರು.

ನಿನ್ನೆ ಬೆಳಿಗ್ಗೆ ಆರಂಭವಾದ ಮಳೆ ಇಂದು ಬಹುರಾತ್ರಿಯವರೆಗೆ ಹನಿಯುತ್ತಲೇ ಇತ್ತು.

ಆಗಾಗ್ಗೆ ಕೆಲವು ನಿಮಿಷಗಳ ಕಾಲ ಬಿಡುವು ದೊರಕಿದರೂ ಕಪ್ಪು ಮೋಡ ಸದಾ ಕವಿದಿತ್ತು.

ನಾಳೆಯೂ ಸಂಜೆಯವರೆಗೆ ಮೋಡ ಕವಿದ ವಾತಾವರಣ, ಆಗಾಗ್ಗೆ ಮಳೆ, ಸಂಜೆ ನಂತರ ಮೋಡ ಚದುರುವ ನಿರೀಕ್ಷೆ.

**

ಸಾಗುವಳಿಗೆ ಸಿಕ್ಕುವ ಭೂಮಿ ಬಗೆಗೆ ಸರ್ವೆ

ಬೆಂಗಳೂರು, ಡಿ. 9– ರಾಜ್ಯದಲ್ಲಿ ವ್ಯವಸಾಯಕ್ಕೆ ದೊರೆಯುವ ಸರ್ಕಾರಿ ಜಮೀನಿನ ಬಗ್ಗೆ ಪ್ರತ್ಯೇಕ ಸರ್ವೆ ಮಾಡಲಾಗುತ್ತಿದ್ದು ಅದು ಪೂರೈಸಿದ ಕೂಡಲೆ ತಾಲ್ಲೂಕುವಾರು ಪಟ್ಟಿ ಪ್ರಕಟಿಸಲಾಗುವುದೆಂದು ಕಂದಾಯ ಸಚಿವ ಶ್ರೀ ಬಿ. ರಾಚಯ್ಯನವರು ಇಂದು ವಿಧಾನ ಸಭೆಗೆ ತಿಳಿಸಿದರು.

ಶ್ರೀಮತಿ ವಿನಿಫ್ರೆಡ್ ಎಫ್. ಫರ್ನಾಂಡೀಸ್ (ಪಿ.ಎಸ್.ಪಿ.– ಕುಂದಾಪುರ) ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ಕಾರ್ಕಳ ತಾಲ್ಲೂಕಿನಲ್ಲಿ 2,725 ಎಕರೆ, ಉಡುಪಿ 1,642 ಎಕರೆ ಮತ್ತು ಕುಂದಾಪುರ ತಾಲ್ಲೂಕಿನಲ್ಲಿ 1,477 ಎಕರೆ ಬಂಜರು ಭೂಮಿ ಇದೆಯೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT