ಝಜ್ಜರ್ (ಹರಿಯಾಣ): ಕೇಂದ್ರ ಸರ್ಕಾರವು ಶೀಘ್ರದಲ್ಲಿ ದೇಶದ ಎಲ್ಲ ಅಂಗವಿಕಲರಿಗೆ ಸಾರ್ವತ್ರಿಕ ಗುರುತಿನ ಚೀಟಿಯನ್ನು ವಿತರಿಸಲಿದೆ.
ಈ ಗುರುತಿನ ಚೀಟಿಗೆ ದೇಶದಾದ್ಯಂತ ಮಾನ್ಯತೆ ಇರಲಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಕೃಷ್ಣ ಪಾಲ್ ಗುಜೇರ್ ಶನಿವಾರ ಹೇಳಿದರು.
ಪ್ರಸ್ತುತ, ಆಯಾ ರಾಜ್ಯಗಳು ಅಂಗವಿಕಲರಿಗೆ ನೀಡುವ ಗುರುತಿನ ಚೀಟಿಗಳಿಗೆ ಇತರ ರಾಜ್ಯಗಳಲ್ಲಿ ಮಾನ್ಯತೆ ಇಲ್ಲ. ಇದರಿಂದಾಗಿ ಸರ್ಕಾರದ ವಿವಿಧ ಯೋಜನೆಗಳು ಮತ್ತು ಮೀಸಲಾತಿಯ ಪ್ರಯೋಜನವನ್ನು ಪಡೆಯಲು ಅಂಗವಿಕಲರಿಗೆ ತೊಂದರೆಯಾಗುತ್ತಿದೆ.
ಅಂಗವಿಕಲರಿಗೆ ಉಚಿತವಾಗಿ ಸಲಕರಣೆಗಳನ್ನು ವಿತರಿಸುವ ಶಿಬಿರದಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಮೂರು ವರ್ಷಗಳಲ್ಲಿ ದೇಶದಾದ್ಯಂತ ಇಂತಹ 5,500 ಶಿಬಿರಗಳನ್ನು ಆಯೋಜಿಸಿದೆ ಎಂದರು.
ಸರ್ಕಾರದ ಯೋಜನೆಗಳನ್ನು ದೇಶದ ಪ್ರತಿಯೊಬ್ಬನಿಗೂ ತಲುಪಿಸುವಂತೆ ಮಾಡಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.