ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ ಆದಾಯ ಇದ್ದರೂ ಭಕ್ತರು ಬೀದಿಪಾಲು

Last Updated 10 ಡಿಸೆಂಬರ್ 2017, 6:19 IST
ಅಕ್ಷರ ಗಾತ್ರ

ನಂಜನಗೂಡು: ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಆದಾಯ ತರುವ ರಾಜ್ಯದ ‘ಎ’ ಶ್ರೇಣಿಯ ದೇಗುಲಗಳಲ್ಲಿ ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯವೂ ಒಂದು. ಆದರೆ, ದೂರದ ಊರುಗಳಿಂದ ಬರುವ ಭಕ್ತರು ಸಮರ್ಪಕ ವಸತಿ ಸೌಕರ್ಯವಿಲ್ಲದೆ ಬೀದಿಯಲ್ಲಿಯೇ ಮಲಗುವಂತಾಗಿದೆ.

ಹೌದು. ಕಳೆದ ಭಾನುವಾರ ಹೊಸ್ತಿಲ ಹುಣ್ಣಿಮೆ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿ ದರ್ಶನ ಪಡೆಯಲು ವಿವಿಧೆಡೆಯಿಂದ ಬಂದಿದ್ದ ಭಕ್ತರು ಸೂಕ್ತ ವಸತಿ ಸೌಲಭ್ಯವಿಲ್ಲದೆ ದೇವಾಲಯದ ಕೈಸಾಲೆ, ಬೀದಿಯಲ್ಲಿ ತುಂತುರು ಮಳೆ, ಚಳಿಯಲ್ಲಿಯೇ ರಾತ್ರಿ ಕಳೆಯುವಂತಾಯಿತು.

ಗಿರಿಜಾ ಕಲ್ಯಾಣ ಮಂಟಪದಲ್ಲಿ ಭಕ್ತರ ಸೇವಾರ್ಥದ ಹಣದಲ್ಲಿ ನಿರ್ಮಿಸಿರುವ 24 ಕೊಠಡಿ ಹಾಗೂ 180 ಮಂದಿ ತಂಗುವಂತಹ ದೇಗುಲದ ಡಾರ್ಮೆಟರಿ ಬಿಟ್ಟರೆ ಇಲ್ಲಿ ಬೇರೆ ವಸತಿಗೃಹಗಳಿಲ್ಲ. ಹೆಚ್ಚಿನ ವಸತಿ ಗೃಹಗಳ ನಿರ್ಮಾಣಕ್ಕೆ ದೇವಾಲಯದ ಆಡಳಿತ ಮಂಡಳಿ, ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ ಮುಂದಾಗಿಲ್ಲ ಎಂಬುದು ಸ್ಥಳೀಯರ ಆರೋಪ.

ಶ್ರೀಕಂಠೇಶ್ವರಸ್ವಾಮಿ ದರ್ಶನ ಬಯಸಿ ಭೇಟಿ ನೀಡುವ ಭಕ್ತರ ಸಂಖ್ಯೆ ಪ್ರತಿವರ್ಷವೂ ಗಣನೀಯವಾಗಿ ಹೆಚ್ಚುತ್ತಿದೆ. ತಿಂಗಳ ಪ್ರತಿ ಭಾನುವಾರ, ಸೋಮವಾರ, ಹಬ್ಬ, ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಭೇಟಿ ನೀಡುತ್ತಾರೆ. ಆದರೆ, ರಾತ್ರಿ ತಂಗಲು ವ್ಯವಸ್ಥೆಯಿಲ್ಲದೆ ಹೆಚ್ಚಿನ ಹಣ ತೆತ್ತು ಖಾಸಗಿ ವಸತಿಗೃಹಗಳಲ್ಲಿ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಕಳೆದ ವರ್ಷದಿಂದ ದೇವಾಲಯದ ಹುಂಡಿಗಳಲ್ಲಿ ಮಾಸಿಕ ₹ 1 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗುತ್ತಿದೆ. ಅಲ್ಲದೆ, ಭಕ್ತರು ಸಲ್ಲಿಸುವ ವಿವಿಧ ಸೇವೆ, ವಿಶೇಷ ದರ್ಶನದ ಟಿಕೆಟ್, ವಾಹನ ನಿಲುಗಡೆ ಶುಲ್ಕ, ಜಪ್ಪಲಿ ಕಾಯುವ ಶುಲ್ಕ ಸೇರಿ ವಾರ್ಷಿಕ ₹ 20 ಕೋಟಿಗೂ ಹೆಚ್ಚು ಆದಾಯ ಬರುತ್ತದೆ. ಕಳೆದ ಮಾರ್ಚ್ ಅಂತ್ಯಕ್ಕೆ ನಗರದ ವಿವಿಧ ಬ್ಯಾಂಕುಗಳಲ್ಲಿ ₹ 90 ಕೋಟಿಗೂ ಹೆಚ್ಚು ಹಣ ಠೇವಣಿ ಇರಿಸಲಾಗಿದೆ. ಆದರೆ, ಅಭಿವೃದ್ಧಿಗೆ ಬಳಸಲು ಮುಜರಾಯಿ ಇಲಾಖೆ ಅನುಮತಿ ಬೇಕಿದೆ’ ಎಂದು ದೇವಾಲಯದ ಇಒ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಎಂ.ಮಹದೇವ್ ಅವರು ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದಾಗ 2006ರಲ್ಲಿ ದೇವಾಲಯ ಸಮಗ್ರ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರು. ಆನಂತರ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಯ ಪಟ್ಟಿಯಲ್ಲಿದ್ದ ಬೃಹತ್ ವಸತಿಗೃಹ ನಿರ್ಮಾಣ ಯೋಜನೆ ಜಾರಿಗೆ ಬರಲೇ ಇಲ್ಲ. ಇದರಿಂದ ಭಕ್ತರು ಬೀದಿಯಲ್ಲಿ ಮಲಗುವಂತಾಗಿದೆ.

‘ಶ್ರೀಕಂಠೇಶ್ವರಸ್ವಾಮಿ ನಮ್ಮ ಮನೆ ದೇವರು. ಹುಣ್ಣಿಮೆ ಸೇವೆಗಾಗಿ ಮನೆಯವರೊಂದಿಗೆ ಬಂದಿದ್ದೇನೆ. ಆದರೆ, ತಂಗಲು ದೇವಾಲಯದಿಂದ ಸೂಕ್ತ ವಸತಿ ಸೌಲಭ್ಯವಿಲ್ಲ. ಖಾಸಗಿಯವರು ಇದನ್ನೇ ಬಂಡವಾಳ ಮಾಡಿಕೊಂಡು ಒಂದು ರೂಂಗೆ ₹ 1.200 ಕೇಳುತ್ತಾರೆ. ಹೆಂಗಸರು, ಮಕ್ಕಳನ್ನು ರಸ್ತೆ ಬದಿಯಲ್ಲಿ ಮಲಗಿಸಿ ಕಾವಲು ಕಾಯುತ್ತಿದ್ದೇನೆ. ಕೋಟ್ಯಂತರ ರೂಪಾಯಿ ಆದಾಯವಿರುವ ದೇವಾಲಯದ ಆಡಳಿತ ಮಂಡಳಿ ವಸತಿ ಸಂಕೀರ್ಣ ನಿರ್ಮಿಸಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು’ ಎಂದು ತುಮಕೂರಿನಿಂದ ಬಂದಿದ್ದ ಸೋಮೇಶ್ವರಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದ ಅಭಿವೃದ್ಧಿ ಯೋಜನೆಯಡಿ ತಿರುಪತಿ ಮಾದರಿಯ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಆದರೆ, ಇದು ಉಪಯೋಗಕ್ಕೆ ಬಾರದಿದ್ದರಿಂದ 4 ವರ್ಷದ ಹಿಂದೆ 14 ಮಳಿಗೆಗಳನ್ನು ವಸತಿಗೃಹಗಳಾಗಿ ಪರಿವರ್ತಿಸಲಾಗಿದೆ. ಆದರೆ, ಭಕ್ತರಿಗೆ ನೀಡುತ್ತಿಲ್ಲ. ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಶ್ರೀಕಂಠೇಶ್ವರ ಕಲಾ ಭವನದಲ್ಲಿ ಅವಕಾಶ ಕಲ್ಪಿಸಿದರೆ ಸಮಸ್ಯೆಗೆ ತಾತ್ಕಾಲಿಕವಾಗಿಯಾದರೂ ಪರಿಹಾರ ಸಿಗುತ್ತದೆ’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಶಂಕರಪುರ ಸುರೇಶ್ ಆಗ್ರಹಿಸಿದರು.

* * 

ಕಳೆದ ಮಾರ್ಚ್ ಅಂತ್ಯಕ್ಕೆ ನಗರದ ವಿವಿಧ ಬ್ಯಾಂಕುಗಳಲ್ಲಿ ₹ 90 ಕೋಟಿಗೂ ಹೆಚ್ಚು ಹಣ ಠೇವಣಿ ಇರಿಸಲಾಗಿದೆ. ಆದರೆ, ಅಭಿವೃದ್ಧಿಗೆ ಬಳಸಲು ಮುಜರಾಯಿ ಇಲಾಖೆ ಅನುಮತಿ ಬೇಕಿದೆ
ಕುಮಾರಸ್ವಾಮಿ
ದೇವಾಲಯದ ಇಒ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT