ಬೀದರ್: ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇಲ್ಲಿಯ ಟೀಮ್ ಯುವಾ ಸದಸ್ಯರು ನಗರದಲ್ಲಿ ಶನಿವಾರ ಹಲ್ಮೆಟ್ ಧರಿಸಿ ಬೈಕ್ ರ್ಯಾಲಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಆರಂಭಗೊಂಡ ರ್ಯಾಲಿಯು ಚೌಬಾರಾ, ನಯಾಕಮಾನ್, ಬಸವೇಶ್ವರ ವೃತ್ತ, ಬೋಮಗೊಂಡೇಶ್ವರ ವೃತ್ತ, ಮಹಾವೀರ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ಹರಳಯ್ಯ ವೃತ್ತ, ಗುದಗೆ ಆಸ್ಪತ್ರೆ ಕ್ರಾಸ್, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತ, ಹೊಸ ಬಸ್ ನಿಲ್ದಾಣ ಮೂಲಕ ಹಾಯ್ದು ಬರೀದಶಾಹಿ ಉದ್ಯಾನ ಸಮೀಪಕ್ಕೆ ಬಂದು ಸಮಾರೋಪಗೊಂಡಿತು.
ಹೆಲ್ಮೆಟ್ ಧರಿಸಿದ್ದ ಸಂಘಟನೆಯ ಸದಸ್ಯರು, ‘ಹೆಲ್ಮೆಟ್ ಬಳಸಿ ಪ್ರಾಣ ಉಳಿಸಿ’ ಎಂದು ಘೋಷಣೆ ಕೂಗುತ್ತ ಬೈಕ್ ರ್ಯಾಲಿ ನಡೆಸಿದರು.
ಮಾರ್ಗ ಮಧ್ಯೆ ಹೆಲ್ಮೆಟ್ ಧರಿಸಿದ್ದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಅಭಿನಂದಿಸಿದರು. ಈ ಮೂಲಕ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಪ್ರೇರಣೆ ನೀಡಿದರು.
ರ್ಯಾಲಿಯ ಮುಂಭಾಗದಲ್ಲಿ ಇದ್ದ ವಾಹನದ ಬಲ ಹಾಗೂ ಎಡಬದಿಗೆ ಹೆಲ್ಮೆಟ್ ಜಾಗೃತಿ ಬರಹಗಳನ್ನು ಹೊಂದಿದ್ದ ಬ್ಯಾನರ್ಗಳನ್ನು ಕಟ್ಟಲಾಗಿತ್ತು. ಧ್ವನಿವರ್ಧಕ ಮೂಲಕ ಹೆಲ್ಮೆಟ್ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲಾಯಿತು.
ರ್ಯಾಲಿಗೆ ಚಾಲನೆ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಮಾತನಾಡಿ, ‘ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು’ ಎಂದು ಹೇಳಿದರು.
‘ಹೆಲ್ಮೆಟ್ ಅಪಘಾತ ಸಂದರ್ಭಗಳಲ್ಲಿ ಜೀವ ಉಳಿಸುತ್ತದೆ. ಹೀಗಾಗಿ ಹೆಲ್ಮೆಟ್ ಅನ್ನು ಪೊಲೀಸರ ಬಲವಂತಕ್ಕಾಗಿ ಧರಿಸದೆ ಸ್ವಯಂ ಪ್ರೇರಣೆಯಿಂದ ಧರಿಸಬೇಕು’ ಎಂದು ತಿಳಿಸಿದರು.
‘ಹೆಲ್ಮೆಟ್ ಜಾಗೃತಿಗಾಗಿ ಟೀಮ್ ಯುವಾ ಸದಸ್ಯರು ಬೈಕ್ ರ್್ಯಾಲಿ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಪ್ರಶಂಶಿಸಿದರು.
ಟೀಮ್ ಯುವಾ ಸದಸ್ಯ ನಾಗನಾಥ ಪಾಟೀಲ ಮಾತನಾಡಿ, ‘ತಂಡವು ಐದು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತವಾಗಿದೆ. ಜಲ ಸಂರಕ್ಷಣೆ, ಪರಿಸರ ಜಾಗೃತಿ, ಸ್ವಚ್ಛತಾ ಅಭಿಯಾನ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತ ಬಂದಿದೆ’ ಎಂದು ತಿಳಿಸಿದರು.
‘ಪ್ರತಿ ವಾರದ ಕೊನೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊ ಳ್ಳಲಾಗುತ್ತಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.