ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ ಕಚೇರಿಯಲ್ಲಿ ನಿಮಗೇನು ಕೆಲಸ?

Last Updated 11 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವರಕವಿ ದ.ರಾ. ಬೇಂದ್ರೆ ‘ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ..’ದಂತಹ ಅಪ್ಯಾಯಮಾನ ಹಾಡನ್ನು ರಚಿಸಲು ಪ್ರೇರಣೆ ಇಂತಹ ನೋಟಗಳಿಂದಲೇ ಸಿಕ್ಕಿರಬಹುದೇ?

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸುತ್ತಾಡುವಾಗ ಈ ಪ್ರಶ್ನೆ ತಲೆಯಲ್ಲಿ ಗಿರಿಕಿ ಹೊಡೆಯುತ್ತಿತ್ತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಇರುವುದು ಶತಮಾನ ಕಂಡಂತಹ ಪಾರಂಪರಿಕ ಕಟ್ಟಡದಲ್ಲಿ. ಇದರ ಆವರಣದಲ್ಲಿ ಚೆಂದದ ಒಂದು ಉದ್ಯಾನ ಇದೆ. ಹಚ್ಚ ಹಸಿರಿನಿಂದ ಕೂಡಿರುವ ಈ ಉದ್ಯಾನದಲ್ಲಿ ಮುಂಗಾರಿನ ನಂತರ ಎಲ್ಲೆಲ್ಲೂ ಚಿಟ್ಟೆಗಳದ್ದೆ ಸಾಮ್ರಾಜ್ಯ. ಜಿಲ್ಲಾಧಿಕಾರಿ ಕಚೇರಿಗೆ ಬರುವ ಅಧಿಕಾರಿಗಳ ಗತ್ತು, ಗೈರತ್ತು ಕೆಲವು ಚಿಟ್ಟೆಗಳದ್ದಾದರೆ, ಮತ್ತೆ ಕೆಲವು ಚಿಟ್ಟೆಗಳದ್ದು ಅದೇನು ಒನಪು ಒಯ್ಯಾರ!

ಆಗತಾನೆ ಅರಿಶಿಣದಲ್ಲಿ ಅದ್ದಿ ತೆಗೆದಂತೆ ಕಾಣುವ ಚಿಟ್ಟೆ ಅರಿಶಿಣ ಬಣ್ಣದ ಡೇರೆ ಹೂವಿನ ಮೇಲೆ ಕೂತರೆ ಕಾಣುವುದೇ ಇಲ್ಲ. ರೆಕ್ಕೆಗಳ ಮೇಲೆ ಕಣ್ಣುಗಳ ಚಿತ್ರ ಹೊಂದಿದ ಪಾತರಗಿತ್ತಿಯದೇ ಮತ್ತೊಂದು ಬಗೆ. ಇದು ನೋಡುಗರಿಗೆ ಚಿಟ್ಟೆಯ ರೆಕ್ಕೆಯಲ್ಲೂ ಕಣ್ಣೆ ಎಂಬ ಅನುಮಾನ ಮೂಡಿಸದೇ ಇರದು.

ಸೃಷ್ಟಿಕರ್ತ ಕತ್ತರಿ ಹಿಡಿದು ಸೂಕ್ಷ್ಮವಾಗಿ ಕತ್ತರಿಸಿದಂತೆ ಕಾಣುವ ಈ ಏರೋಪ್ಲೇನ್‌ ಚಿಟ್ಟೆಗಳ ಅಂದವನ್ನು ‌ರೆಕ್ಕೆ ಬಡಿಯುವಾಗ ನೋಡಿಯೇ ಸವಿಯಬೇಕು.

ಸದಾ ಸುಳಿದಾಡುವ ಪಾತರಗಿತ್ತಿಯದ್ದು ದಣಿವರಿಯದ ಹಾರಾಟ. ಪುಟ್ಟ ಜಾಗದಲ್ಲೇ ಅವುಗಳು ಹಲವು ಕಿಲೋಮೀಟರ್‌ಗಳಷ್ಟು ದೂರ ಸುಳಿದಾಡುತ್ತವೆಯಂತೆ. ಸ್ವಚ್ಛಂದವಾಗಿ ಹಾರಾಡುವ ಅವುಗಳು ಹೂವಿನ ಮೆತ್ತನೆ ಹಾಸಿಗೆ ಮೇಲೆ ಕುಳಿತು ಮಕರಂದ ಹೀರುವ ಪರಿ ಬಲು ಅನನ್ಯ.

ಹೊಸ ಜಿಲ್ಲಾಧಿಕಾರಿ ಕಟ್ಟಡದ ಕೆಲಸ ಭರದಿಂದ ಸಾಗಿದ್ದು, ಕಚೇರಿ ಸ್ಥಳಾಂತರಕ್ಕೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಹಳೆಯ ಕಟ್ಟಡದ ಪಾಡೇನು ಎಂಬ ಪ್ರಶ್ನೆ ಕಾಡಿದ್ದುಂಟು. ಅದಕ್ಕೆ ಉತ್ತರವಾಗಿ, ಇದನ್ನು ನಮಗೆ ಬಿಟ್ಟು ಬಿಡಿ, ಹಾಯಾಗಿ ಇಲ್ಲಿಯೆ ಕಾಲಕಳೆಯುತ್ತೇವೆ ಎಂದು ಆ ಚಿಟ್ಟೆಗಳು ಕೇಳುತ್ತವೆಯೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT