ಬೆಂಗಳೂರು: ವಿಶೇಷ ಭತ್ಯೆ ಪಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ವೇತನ ಕಡಿತ ಮಾಡುವ ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಲಾಗಿದೆ.
‘2008ರ ಆ.1ಕ್ಕಿಂತ ಮುಂಚಿತವಾಗಿ ನೇಮಕವಾದ ಶಿಕ್ಷಕರ ಪೈಕಿ 7,242 ಮಂದಿಗೆ ಪ್ರತಿ ತಿಂಗಳು 4,400ರಂತೆ ₹ 8.33 ಕೋಟಿ ಪಾವತಿ ಮಾಡಲಾಗಿತ್ತು. ಅದನ್ನು ವಸೂಲಿ ಮಾಡಲು ವೇತನದಲ್ಲಿ ಕಡಿತ ಮಾಡಬೇಕು ಎಂಬ ಆದೇಶ ಹೊರಡಿಸಲಾಗಿತ್ತು.
ಈ ಬಗ್ಗೆ ಆಕ್ಷೇಪ ವ್ಯಕ್ತವಾದಾಗ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ವೇತನ ಕಡಿತ ಆದೇಶಕ್ಕೆ ತಡೆಹಿಡಿಯಲಾಗುವುದು ಎಂದು ಹೇಳಿಕೆ ನೀಡಿದ್ದರು.
ಆದರೂ ಕೆಲವೆಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ವೇತನ ಕಡಿತ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಆದೇಶ ಮಾಡಿದ್ದು, ಎಲ್ಲರೂ ಅದನ್ನು ಪಾಲನೆ ಮಾಡಬೇಕು’ ಎಂದು ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಹೇಳಿದ್ದಾರೆ.