ಶ್ರೀರಂಗಪಟ್ಟಣ: ಸಮೀಪದ ಕಾವೇರಿ ಸಂಗಮದಲ್ಲಿ ಶೌಚಾಲಯ ಇಲ್ಲದೇ ಪ್ರವಾಸಿಗರು ಹಾಗೂ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿರುವ ಸಂಗಮಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಶಾಲೆ, ಕಾಲೇಜುಗಳಲ್ಲಿ ಪ್ರವಾಸ ಕೈಗೊಳ್ಳುವ ತಿಂಗಳುಗಳಲ್ಲಿ, ಕ್ರಿಸ್ಮಸ್, ರಂಜಾನ್ ಮೊದಲಾದ ವಿಶೇಷ ದಿನಗಳಲ್ಲಿ ಇಲ್ಲಿಗೆ ದಿನಕ್ಕೆ ಸಹಸ್ರಾರು ಮಂದಿ ಭೇಟಿ ನೀಡುವುದುಂಟು. ಪಿಂಡ ಪ್ರದಾನ, ಅಸ್ಥಿ ವಿಸರ್ಜನೆಗೆಂದು ಜನರು ಇಲ್ಲಿಗೆ ಬರುವುದು ವಾಡಿಕೆ. ಮಹಾಲಯ ಅಮಾವಾಸ್ಯೆ ದಿನಗಳಲ್ಲಿ ಇಲ್ಲಿ ಜನಜಾತ್ರೆಯೇ ಸೇರುತ್ತದೆ.