‘ಅತ್ಯಾಚಾರ’ದ ಆಕ್ರೋಶಪೂರ್ಣ ವರ್ಣನೆ
ಬೆಂಗಳೂರು, ಡಿ. 13– ಸಭೆಯ ಎಲ್ಲ ಕಡೆಯ ಸದಸ್ಯರಿಂದ ಮಧುಗಿರಿ ತಾಲ್ಲೂಕಿನಲ್ಲಿ ಪೊಲೀಸ್ ‘ಅತ್ಯಾಚಾರ’ದ ದುಃಖ ಹಾಗೂ ಆಕ್ರೋಶಪೂರಿತ ವರ್ಣನೆ ಗೃಹ ಸಚಿವರ, ಮಂತ್ರಿಮಂಡಲದ ರಾಜಿನಾಮೆಗೆ ಹಾಗೂ ನ್ಯಾಯಾಧಿಕಾರಿಯಿಂದ ವಿಚಾರಣೆಗೆ ತೀವ್ರ ಒತ್ತಾಯ.
ನ್ಯಾಯಾಧಿಕಾರಿಯಿಂದ ವಿಚಾರಣೆ ನಡೆಸಲು ಗೃಹಸಚಿವರು ಒಪ್ಪಿಕೊಳ್ಳಲಿಲ್ಲವೆಂದು, ಕೋಪ, ಅಸಮಾಧಾನಗಳಿಂದ ತೀವ್ರವಾಗಿ ಪ್ರತಿಭಟಿಸಿ ‘ನಾಚಿಕೆಗೇಡು! ನಾಚಿಕೆಗೇಡು!’ ಎಂದು ಕೂಗುತ್ತ ವಿರೋಧಪಕ್ಷಗಳ ಸದಸ್ಯರು ಇಂದು ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು.
ಸರ್ವಾಧಿಕಾರಿ ಆಗಿದ್ದರೆ....
ಬೆಂಗಳೂರು, ಡಿ. 13– ‘ನಾನು ಸರ್ವಾಧಿಕಾರಿಯಾಗಿದ್ದರೆ ಅತ್ಯಾಚಾರ ಮಾಡಿದ ಅಧಿಕಾರಿಗಳನ್ನು ಗುಂಡಿಟ್ಟು ಕೊಲ್ಲುತ್ತಿದ್ದೆ’ ಎಂದು ಕಾಂಗ್ರೆಸ್ ಸದಸ್ಯ ಶ್ರೀ ಸದ್ಯೋಜಾತಪ್ಪ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು.
‘ನಾವಿದ್ದು ಏನು ಪ್ರಯೋಜನ?’
ಬೆಂಗಳೂರು, ಡಿ. 13– ದೇಶದ ರಕ್ಷಣೆಗೆ ಯಾರಿದ್ದಾರೋ ಅವರಿಂದಲೇ ಹೆಂಗಸರ ಮಾನಭಂಗ ಆದರೆ ನಾವಿದ್ದು ಏನು ಪ್ರಯೋಜನ?
ಬುಧವಾರ ವಿಧಾನಸಭೆಯಲ್ಲಿ ಮಧುಗಿರಿ ತಾಲ್ಲೂಕಿನ ‘ಅತ್ಯಾಚಾರ’ ಪ್ರಕರಣದ ಬಗ್ಗೆ ನಡೆದ ಚರ್ಚೆಯ ಕಾಲದಲ್ಲಿ ಕಾಂಗ್ರೆಸ್ ಸದಸ್ಯೆ ಶ್ರೀಮತಿ ನಾಗರತ್ನಮ್ಮ ಹಿರೇಮಠ್ ಅವರು ನೊಂದು ಹೇಳಿದ ಮಾತು.
ಸತ್ಯ, ಕ್ರೋಧ, ಅಸಮಾಧಾನ, ಉದ್ರೇಕದ ವಾತಾವರಣದಲ್ಲಿ ಚರ್ಚೆ ಎಂದು ವಿರೋಧ ಪಕ್ಷಗಳ ಸದಸ್ಯರಿಂದ ಒತ್ತಾಯ. ಚರ್ಚೆಯಲ್ಲಿ ಭಾಗವಹಿಸಿ ದ ಕೆಲ ಸದಸ್ಯರ ಮಾತುಗಳಿಂದ ಚರ್ಚೆಯ ಸ್ವರೂಪದ ಪರಿಚಯವಾಯಿತು.