ಇಸ್ಲಾಮಾಬಾದ್/ ಹೇಗ್: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭಾರತದ ರಾಜತಾಂತ್ರಿಕ ಅಧಿಕಾರಿ ಭೇಟಿ ಮಾಡಲು ಅವಕಾಶ ನೀಡಬೇಕೆಂಬ ಭಾರತದ ಮನವಿಯನ್ನು ಪಾಕಿಸ್ತಾನ ಬುಧವಾರ ಪುನಃ ತಿರಸ್ಕರಿಸಿದೆ.
‘ಬೇಹುಗಾರಿಕೆ ನಡೆಸಿರುವ ಕುಲಭೂಷಣ್ ಅವರು ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿರುವ ಮಾಹಿತಿಯನ್ನು ಕಲೆ ಹಾಕಲು ಅವರ ಭೇಟಿಯನ್ನು ಭಾರತ ಬಯಸುತ್ತಿದೆ’ ಎಂದು ಪಾಕಿಸ್ತಾನ ದೂರಿದೆ.
ಜಾಧವ್ ಅವರ ಭೇಟಿಗೆ ಅನುಮತಿ ಕೋರಿ ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಆ ಮನವಿಗೆ ಪ್ರತಿ ಹೇಳಿಕೆ ದಾಖಲು ಮಾಡಿರುವ ಪಾಕಿಸ್ತಾನ, ‘ನಮ್ಮ ನಿಯಮದ ಪ್ರಕಾರ, ಕೇವಲ ನ್ಯಾಯಬದ್ಧವಾಗಿರುವ ವ್ಯಕ್ತಿಗಳ ಭೇಟಿಗೆ ಅವಕಾಶ ನೀಡಲಾಗುವುದೇ ವಿನಾ ಗೂಢಚಾರರಿಗೆ ಅಲ್ಲ’ ಎಂದಿದೆ.
‘ಪಾಸ್ಪೋರ್ಟ್ನಲ್ಲಿ ಮುಸ್ಲಿಂ ಹೆಸರನ್ನು ಇಟ್ಟುಕೊಂಡು ಪಾಕಿಸ್ತಾನಕ್ಕೆ ಜಾಧವ್ ಬಂದಿರುವುದು ಭಾರತಕ್ಕೂ ಗೊತ್ತಿದೆ. ಇದನ್ನು ನೋಡಿದರೆ ಜಾಧವ್ ಗೂಢಚಾರರಾಗಿಯೇ ಇಲ್ಲಿಗೆ ಬಂದಿರುವುದು ಎನ್ನುವುದು ಸ್ಪಷ್ಟವಾಗುತ್ತದ’ ಎಂದು ಪಾಕಿಸ್ತಾನ ಹೇಳಿರುವುದಾಗಿ ‘ಎಕ್ಸ್ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.