ವಿಜಯಪುರ: ‘ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೋರಂ ಕೊರತೆ ಸೃಷ್ಟಿಸಿದ ಖಬರಗೇಡಿ ಶಾಸಕರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮರು ಆಯ್ಕೆ ಮಾಡಬೇಡಿ’ ಎಂದು ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಬುಧವಾರ ಇಲ್ಲಿ ಮನವಿ ಮಾಡಿದರು.
ಮಾಜಿ ಶಾಸಕ ಆರ್.ಆರ್. ಕಲ್ಲೂರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೋರಂ ಕೊರತೆಯಿಂದಾಗಿ ಅಧಿವೇಶನದ ಮೊದಲ ದಿನವೇ ಕಲಾಪ ಆರಂಭಿಸಲು ಸಮಸ್ಯೆ ಉಂಟಾಯಿತು. ಇಂತಹ ಶಾಸಕರ ಅಗತ್ಯ ನಮಗಿಲ್ಲ. ಇವರ್ಯಾರನ್ನೂ ಮತ್ತೆ ಆರಿಸಿ ತರಬೇಡಿ’ ಎಂದರು.
‘ಇಂದಿನ ರಾಜಕಾರಣ ಬಹಳ ಕೆಟ್ಟು ಹೋಗಿದೆ. ಇದರಿಂದ ಒಳ್ಳೆಯವರು ರಾಜಕಾರಣ ಪ್ರವೇಶಿಸದಂತಾಗಿದೆ. ಕೆಟ್ಟ ರಾಜಕಾರಣಿಗಳ ಮಾತನ್ನು ಕೇಳಿಯೇ ಈ ಭಾಗದವರು ಎನ್ಟಿಪಿಸಿ ಸ್ಥಾಪನೆಗೆ ವಿರೋಧಿಸಿದ್ದರು. ಇನ್ನಾದರೂ ಕೆಟ್ಟ ರಾಜಕಾರಣಿಗಳ ಮಾತು ಕೇಳುವುದನ್ನು ನಿಲ್ಲಿಸಿ. ಒಳ್ಳೆಯದನ್ನು ಬೆಂಬಲಿಸಿ’ ಎಂದು ಸಲಹೆ ನೀಡಿದರು.