ರಾಯಚೂರು: ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಚಿತ್ರ ನಟಿ ಪೂಜಾ ಗಾಂಧಿ ಬುಧವಾರ ಹಾಜರಾಗಲಿಲ್ಲ.
‘ಪೂಜಾ ಗಾಂಧಿ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿರುವುದರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದೆವು. ಆದೇಶದ ದಿನವನ್ನು ನ್ಯಾಯಾಧೀಶರು ಡಿಸೆಂಬರ್ 23ಕ್ಕೆ ಮುಂದೂಡಿದರು. ಅಂದು ಪೂಜಾ ಗಾಂಧಿ ಹಾಜರಾಗುವರು’ ಎಂದು ಪೂಜಾ ಗಾಂಧಿ ಪರ ವಕೀಲರಾದ ಐ.ಎಂ.ದೊಡ್ಡಮನಿ, ಜಬ್ಬರಖಾನ್ ಪಠಾಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ರಾಯಚೂರು ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ, ಅನುಮತಿಯಿಲ್ಲದೆ ವಾಹನ ಬಳಸಿದ್ದಾರೆ ಎಂದು ಸದರ್ ಬಜಾರ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ, ಆದೇಶ ಕಾಯ್ದಿರಿಸಿದೆ. ಈ ಮೊದಲು, ಆದೇಶ ಪ್ರಕಟಿಸಲು ನ್ಯಾಯಾಲಯವು ನಿಗದಿಪಡಿಸಿದ್ದ ಡಿಸೆಂಬರ್ 4 ರಂದು ಪೂಜಾ ಗಾಂಧಿ ಹಾಜರಾಗಿದ್ದರು. ಆದರೆ ಆದೇಶದ ದಿನವನ್ನು ಡಿಸೆಂಬರ್ 13ಕ್ಕೆ ಮುಂದೂಡಲಾಗಿತ್ತು.