ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಚುನಾವಣೆ ಮತಗಟ್ಟೆ ಸಮೀಕ್ಷೆ: ಬಿಜೆಪಿಗೆ ಗೆಲುವು

ಕಾಂಗ್ರೆಸ್‌–ಬಿಜೆಪಿ ನಡುವೆ ಮತ್ತೆ ವಾಗ್ಯುದ್ಧ
Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ಭಾರಿ ಜಿದ್ದಾಜಿದ್ದಿಯ ಚುನಾವಣಾ ಪ್ರಚಾರ ನಡೆಸಿದ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂದು ವಿವಿಧ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಅಂದಾಜಿಸಿದೆ.

ಹಿಮಾಚಲ ಪ್ರದೇಶದ ಚುನಾವಣೆಯಲ್ಲಿಯೂ ಕಾಂಗ್ರೆಸನ್ನು ಬಿಜೆಪಿ ಅಧಿಕಾರದಿಂದ ಕೆಳಗಿಳಿಸಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಗುಜರಾತ್‌ನಲ್ಲಿ ಎರಡನೇ ಮತ್ತು ಕೊನೆಯ ಹಂತದ ಮತದಾನ ಪೂರ್ಣಗೊಂಡ ತಕ್ಷಣವೇ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾದವು.

182 ಸದಸ್ಯಬಲದ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರಲು 92 ಸ್ಥಾನಗಳು ಅಗತ್ಯ. 2012ರ ಚುನಾವಣೆಯಲ್ಲಿ ಬಿಜೆಪಿ 115 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ 61 ಸ್ಥಾನಗಳನ್ನು ಪಡೆದಿತ್ತು.

ಹಿಮಾಚಲ ಪ್ರದೇಶ: ಈ ಗುಡ್ಡಗಾಡು ರಾಜ್ಯದ ಜನರು ಪ್ರತಿ ಐದು ವರ್ಷಕ್ಕೊಮ್ಮೆ ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಪರ್ಯಾಯವಾಗಿ ಆರಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಅದು ಪುನರಾವರ್ತನೆ ಆಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.

2012ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ ಪಕ್ಷವು 36 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಬಿಜೆಪಿ 26 ಸ್ಥಾನಗಳನ್ನು ಗೆದ್ದಿತ್ತು.

ಒಟ್ಟು ಮತದಾನ ಪ್ರಮಾಣ ಶೇ 67.75

ಮಧ್ಯ ಮತ್ತು ಉತ್ತರ ಗುಜರಾತಿನಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ಶೇ 68.70ರಷ್ಟು ಮತ ಚಲಾವಣೆಯಾಗಿದೆ. 14 ಜಿಲ್ಲೆಗಳ 93 ಕ್ಷೇತ್ರಗಳಿಗೆ ಮತದಾನ ನಡೆಯಿತು. ಒಟ್ಟು 851 ಅಭ್ಯರ್ಥಿಗಳು ಕಣದಲ್ಲಿದ್ದರು. ಮೊದಲ ಹಂತಕ್ಕೆ (ಶೇ 66.75) ಹೋಲಿಸಿದರೆ ಎರಡನೇ ಹಂತದಲ್ಲಿ ಮತದಾನ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಮೊದಲ ಹಂತದಲ್ಲಿ ಸೌರಾಷ್ಡ್ರ–ಕಛ್‌ ಮತ್ತು ದಕ್ಷಿಣ ಗುಜರಾತ್‌ ಪ್ರದೇಶದ 89 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಈ ಬಾರಿಯ ಒಟ್ಟು ಮತದಾನ ಪ್ರಮಾಣ ಶೇ 67.75ರಷ್ಟಾಗಿದೆ.

ಕಾಂಗ್ರೆಸ್‌ನಿಂದ ನೆಪಗಳ ಹುಡುಕಾಟ

ಗುಜರಾತಿನಲ್ಲಿ ಭಾರಿ ಸೋಲನ್ನು ಮನಗಂಡಿರುವ ಕಾಂಗ್ರೆಸ್‌, ನೆಪಗಳಿಗಾಗಿ ಹುಡುಕಾಡುತ್ತಿದೆ ಎಂದು ಆಯೋಗವನ್ನು ಟೀಕಿಸಿರುವ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ರವಿಶಂಕರ್‌ ಪ್ರಸಾದ್‌ ಮತ್ತು ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರ ನಿಯೋಗವು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಪ್ರಧಾನಿ ಮೋದಿ ಮತ್ತು ಇತರರ ಮೇಲೆ ಕಾಂಗ್ರೆಸ್‌ ಮಾಡಿರುವ ಆರೋಪವನ್ನು ಅಲ್ಲಗಳೆದಿದೆ.

ಮತದ ಬಳಿಕ ಮೋದಿ ‘ರೋಡ್‌ಷೋ’

ಅಹಮದಾಬಾದ್‌ ಜಿಲ್ಲೆಯ ಸಾಬರಮತಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಸಾಲಿನಲ್ಲಿ ನಿಂತು ತಮ್ಮ ಸರದಿಗಾಗಿ ಕಾದು ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿದರು. ಮತ ಹಾಕಿದ ಬಳಿಕ, ಹೊರಗೆ ಜಮಾಯಿಸಿದ್ದ ಜನರತ್ತ ತಮ್ಮ ಶಾಯಿ ಗುರುತಿನ ಬೆರಳನ್ನು ಎತ್ತಿ ತೋರಿಸಿದರು.

ಸ್ವಲ್ಪ ದೂರ ನಡೆದುಕೊಂಡು ಹೋದ ಮೋದಿ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಗೆ ಶುಭಾಶಯ ಹೇಳಿದರು. ಬಳಿಕ, ಕಾರಿನ ಮೆಟ್ಟಿಲಿನ ಮೇಲೆ ನಿಂತು ಜನರತ್ತ ಕೈಬೀಸಿದರು. ಆದರೆ, ಮೋದಿ ಅವರ ಈ ಕ್ರಮಕ್ಕೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಇದು ‘ರೋಡ್‌ಷೋ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

* ಚುನಾವಣಾ ಪ್ರಚಾರ ಬಿಸಿಯೇರಿದಂತೆ ಬಿಜೆಪಿ ಸಂಪೂರ್ಣವಾಗಿ ದಿವಾಳಿಯಾಗಿದ್ದನ್ನು ಕಂಡೆವು. ಅವರು ವಿಷಯ ಬದಲಾಯಿಸುತ್ತಲೇ ಹೋದರು

–ರಾಹುಲ್ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT