ರಾಮನಗರ: ಹೊನ್ನಾವರದಲ್ಲಿ ಮೊಗವೀರ ಸಮುದಾಯದ ಪರೇಶ್ ಮೇಸ್ತ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ, ಅದನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳು ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಪೊಲೀಸರು ಬಂಧಿಸಿರುವ ಹಿಂದೂ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಹತ್ಯೆಗೀಡಾದ ಪರೇಶ್ ಮೇಸ್ತ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಪ್ರವಾಸ ಕೈಗೊಂಡು ಕೋಮು ಸೌಹಾರ್ದದ ಭಾಷಣ ಮಾಡಿದ ಸ್ಥಳಗಳಲ್ಲಿ ಕೋಮು ಗಲಭೆಗಳು ನಡೆಯುತ್ತಿವೆ. ಇದನ್ನು ಗಮನಿಸಿದರೆ ಸರ್ಕಾರವೇ ಕೆಲ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಗಲಭೆ ನಡೆಸುತ್ತಿರುವ ಅನುಮಾನಗಳು ದಟ್ಟವಾಗಿವೆ ಎಂದು ಆಪಾದಿಸಿದರು.
ಪಿಎಫ್ಐ ಸಂಘಟನೆಗೆ ಐಎಸ್ ಐಎಸ್ ನಂಟಿದ್ದು, ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿದರು. ವೇದಿಕೆಯ ಪದಾಧಿಕಾರಿಗಳಾದ ರಾಜೇಶ್, ಬಾಲವೆಂಕಟೇಶ್, ಜಗದೀಶ್, ಲೋಕೇಶ್, ಗಜೇಂದ್ರ ಸಿಂಗ್, ಚಂದ್ರು, ಗಿರೀಶ್ ಇದ್ದರು.