ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ನಾಟಿಗೆ ಭರದ ಸಿದ್ಧತೆ

Last Updated 15 ಡಿಸೆಂಬರ್ 2017, 6:52 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನ ಬೆಳೆ ಭತ್ತ ನಾಟಿಗೆ ಭರದ ಸಿದ್ಧತೆ ನಡೆದಿದೆ. ಈಗಾಗಲೇ ಗದ್ದೆಯಲ್ಲಿ ತಯಾರಿಸಿದ ಸಸಿ ಸಿದ್ಧಗೊಂಡಿವೆ. ಹಿಂಗಾರು ಹಂಗಾಮಿನ ಬೆಳೆಗೆ (ವಾರ ಬಂದಿಯಂತೆ ಹತ್ತು ದಿನ ನೀರು ಹರಿಸುವುದು 12 ದಿನ ಸ್ಥಗಿತಗೊಳಿಸುವುದು) ಸರದಿಯಲ್ಲಿ ಮಾರ್ಚ್ 28ವರೆಗೆ ನೀರು ಹರಿಸುವ ನಿರ್ಣಯವನ್ನು ಈಚೆಗೆ ಬೆಂಗಳೂರಿನಲ್ಲಿ ಸಭೆ ಸೇರಿದ್ದ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಲಾಗಿದೆ ಎಂದು ನಿಗಮದ ಎಂಜಿನಿಯರ್‌ ತಿಳಿಸಿದರು.

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅಧಿಕ ನೀರು ಬೇಕಾಗುವ ಭತ್ತ, ಕಬ್ಬು, ವಿಳ್ಯದ ಎಲೆ ನಿಷೇಧಿತ ಬೆಳೆಯಾಗಿವೆ. ಹತ್ತಿ, ಶೇಂಗಾ, ಮೆಕ್ಕೆಜೋಳ ಕಡಲೆ,ಗೋದಿ, ಸಜ್ಜೆ, ಸೂರ್ಯಕಾಂತಿ ಬೆಳೆಯನ್ನು ಮಾತ್ರ ಬೆಳೆಯಲು ಅವಕಾಶವಿದೆ.

‘ಆದರೆ ಕಾಲುವೆ ಮೇಲ್ಭಾಗದ ರೈತರು ಬೆಳೆ ಪದ್ಧತಿ ಉಲ್ಲಂಘಿಸುತ್ತಿರುವುದರಿಂದ ಕಾಲುವೆ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದರಿಂದ ಬೇಸಿಗೆ ಹಂಗಾಮಿನ ಬೆಳೆಗೆ ನೀರು ಪಡೆಯಲು ಹರಸಾಹಸ ಪಡುವಂತಾಗಿದೆ’ ಎನ್ನುತ್ತಾರೆ ರೈತ ಶಿವನಾಗಪ್ಪ.

‘ಅಲ್ಲದೆ, ಭತ್ತ ಬೆಳೆಗೆ ಗದ್ದೆಯಲ್ಲಿ ನಿರಂತರವಾಗಿ ನೀರು ನಿಲ್ಲಿಸಬೇಕು. ವಾರಬಂದಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಮೇಲ್ಭಾಗದ ರೈತರು ಮಾತ್ರ ನೀರು ಸೆಳೆದುಕೊಳ್ಳುತ್ತಾರೆ. ಅದೇ ಕಾಲುವೆ ಕೆಳಭಾಗದ ರೈತರಿಗೆ ನೀರಿನ ತೊಂದರೆಯಾಗುವುದು ಸಾಮಾನ್ಯವಾಗಿದೆ. ನೀರಿಗಾಗಿ ಭೀಮರಾಯನಗುಡಿ ಕೆಬಿಜೆಎನ್ಎಲ್ ನಿಗಮದ ಕಚೇರಿಯ ಮುಂದೆ ಪ್ರತಿಭಟನೆ, ಧರಣಿ ನಡೆಸುವುದು ಸಾಮಾನ್ಯವಾಗಿದೆ’ ಎಂದು ರೈತ ಭೀಮರಾಯ ತಿಳಿಸಿದರು.

‘ಎಲ್ಲರೂ ಕಾನೂನು ಗೌರವಿಸಿ ನಿಯಮದ ಪ್ರಕಾರ ನೀರು ಪಡೆದುಕೊಂಡರೆ ಯಾವುದೇ ಸಮಸ್ಯೆ ಉದ್ಭವಿಸದು. ಅನಗತ್ಯ ತೊಂದರೆ ನೀಡಿ ಎಲ್ಲದಕ್ಕೂ ಸರ್ಕಾರ ಹಾಗೂ ಅಧಿಕಾರಿಗಳು ಬಗೆಹರಿಸಿ ಎಂದು ಹೋರಾಟ, ಪ್ರತಿಭಟನೆ ಮಾಡುವುದು ಸರಿಯಲ್ಲ. ಇದನ್ನು ರೈತರು ಮೊದಲು ಅರಿತುಕೊಳ್ಳಬೇಕು’ ಎಂದು ಈಚೆಗೆ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ರೈತರ ಸಮಸ್ಯೆಗಳ ಕುರಿತು ನಡೆದ ಚರ್ಚೆಯಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ ಎಚ್ಚರಿಕೆ ನೀಡಿದ್ದರು.

ಕೃತಕ ಕೆರೆ: ‘ಕಾಲುವೆ ಮೇಲ್ಭಾಗದಲ್ಲಿ ರೈತರು ವಿತರಣಾ ಕಾಲುವೆ ಸೀಳಿ ಅಕ್ರಮವಾಗಿ ಪೈಪ್‌ಲೈನ್ ಹಾಕಿಕೊಂಡು ಕೃತಕ ಕೆರೆ ನಿರ್ಮಿಸಿ ಮುಂಜಾಗ್ರತಾ ಕ್ರಮವಾಗಿ ಕೆರೆಯಲ್ಲಿ ನೀರು ಸಂಗ್ರಹಿಸುತ್ತಿದ್ದಾರೆ. ಇದರಿಂದ ಕಾಲುವೆ ಕೆಳಭಾಗದ ರೈತರಿಗೆ ನೀರು ದೊರಕುತ್ತಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ದಲಿತ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್.ಶರಣುರಡ್ಡಿ ಮನವಿ ಮಾಡಿದ್ದಾರೆ.

* * 

ಆಂಧ್ರವಲಸಿಗರು ಕಾಲುವೆ ಒಡೆದು ಅಕ್ರಮವಾಗಿ ನೀರು ಸೆಳೆದುಕೊಂಡು ಕೃತಕ ಕೆರೆಯಲ್ಲಿ ನೀರು ಸಂಗ್ರಹಿಸಿಕೊಂಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು
ಬಿ.ಎಸ್‌.ಶರಣುರಡ್ಡಿ
ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT