ಭೋಪಾಲ್: ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಕರೋಲ್ ತಂಡ (ಏಸುವನ್ನು ಸ್ತುತಿಸಿ ಹಾಡುವ ಗಾಯಕರ ತಂಡ) ಮತ್ತು ಇಬ್ಬರು ಧರ್ಮಗುರುಗಳನ್ನು ಪೊಲೀಸರು ಕೆಲವು ಗಂಟೆಗಳ ಕಾಲ ವಶಕ್ಕೆ ತೆಗೆದುಕೊಂಡ ಘಟನೆ ಮಧ್ಯಪ್ರದೇಶದ ಸಾತ್ನಾ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಈ ಗಾಯನ ತಂಡವು ಮತಾಂತರ ಮಾಡುತ್ತಿದೆ ಎಂದು ಬಜರಂಗ ದಳ ಕಾರ್ಯಕರ್ತರು ದೂರಿದ್ದರು.
ಇದಾದ ಮೇಲೆ ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಧರ್ಮಗುರುಗಳ ಬಗ್ಗೆ ವಿಚಾರಿಸಲು ಹೋದ ಗಾಯನ ತಂಡದವರ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಕಾರಿಗೆ ಬೆಂಕಿ ಹಚ್ಚಿರುವ ಪ್ರಕರಣದಲ್ಲಿ ದುಷ್ಕರ್ಮಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕ್ರಿಸ್ಮಸ್ ಕರೋಲ್ ಹಾಡುತ್ತಾ ಹೋಗುತ್ತಿದ್ದಾಗ 30 ಮಂದಿ ಇರುವ ಗಾಯನ ತಂಡವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಇವರೆಲ್ಲರೂ ಮತಾಂತರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸರು ಹೇಳಿದ್ದಾರೆ.