ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಟದ ಕುಲುಮೆಯಲ್ಲಿ ಗೆದ್ದ ‘ಅಗ್ನಿದಿವ್ಯ’

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

2004ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಅಧಿಕಾರ ಹಿಡಿಯುವುದು ಖಚಿತವಾದಾಗ ಸೋನಿಯಾ ಗಾಂಧಿ ಅವರಿಗೆ ಅವರಷ್ಟೇ ಎತ್ತರದ ಚೆಂಗುಲಾಬಿ ಹಾರ ಹಾಕಿ ಸಂಭ್ರಮಿಸಿದ್ದರು ಕಾರ್ಯಕರ್ತರು. ಆಕೆ ಚುನಾವಣೆಗೆ ನಿಲ್ಲುವಾಗಲೇ ಎದ್ದಿದ್ದ ‘ವಿದೇಶಿ ಮೂಲ’ದ ಗದ್ದಲ ಆಗ ಮತ್ತಷ್ಟು ಹೆಚ್ಚಾಗಿತ್ತು. ತಾವು ಪ್ರಧಾನಿಯಾಗುವುದಿಲ್ಲ ಎಂದು ಒಮ್ಮೆಲೇ ಸೋನಿಯಾ ಘೋಷಿಸಿದರು. ಅರ್ಥಶಾಸ್ತ್ರಜ್ಞ ಮನಮೋಹನ್‌ಸಿಂಗ್‌ ಅವರನ್ನು ಪ್ರಧಾನಿ ಹುದ್ದೆಗೆ ಸೂಚಿಸಿದರು. ಮುಂದಿನ ಹತ್ತುವರ್ಷಗಳ ಕಾಲ ಹೆಚ್ಚುಕಡಿಮೆ ಸರ್ಕಾರದ ಪ್ರಮುಖ ನಿರ್ಧಾರಗಳ ಹಿಂದೆ ಅವರ ಸಲಹೆ, ಸೂಚನೆ ಇದ್ದೇ ಇರುತ್ತಿತ್ತು.

ಇದಕ್ಕೂ ಹದಿಮೂರು ವರ್ಷಗಳ ಹಿಂದೆ 1991ರ ಮೇ 21ರ ಕಾರಿರುಳು ರಾಜೀವ್ ಗಾಂಧಿ ಅವರ ಕಾರ್ಯದರ್ಶಿಯಾಗಿದ್ದ ವಿನ್ಸಂಟ್ ಜಾರ್ಜ್‌, ಸೋನಿಯಾ ಅವರಿಗೆ ಕೆಟ್ಟ ಸುದ್ದಿಯೊಂದನ್ನು ಅರುಹಿದ್ದರು. ಆಘಾತಗೊಂಡ ಸೋನಿಯಾಗೆ ಬಾಲ್ಯದ ಆಸ್ತಮಾ ಮರುಕಳಿಸಿತ್ತು. ಮಾರನೇ ದಿನ ಮದ್ರಾಸ್‌ನಿಂದ ದೆಹಲಿಗೆ ಬರುತ್ತಿದ್ದ ವಾಯುಪಡೆಯ ವಿಮಾನದಲ್ಲಿ ಆಕೆಗೆ ಎಲ್ಲವೂ ಆಗಿದ್ದ ರಾಜೀವ್‌ ಕಳೇಬರದ ಪಕ್ಕ ಕಲ್ಲಿನಂತೆ ಕುಳಿತಿದ್ದರು.  ರಾಜೀವ್‌ ಶವಪೆಟ್ಟಿಗೆ ಹೂವಿನ ಹಾರಗಳಿಂದ ಮುಚ್ಚಿಹೋಗಿತ್ತು. ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಪೆಟ್ಟಿಗೆಯಲ್ಲಿ ರಾಜೀವ್‌ ಅವರ ಭದ್ರತಾ ಅಧಿಕಾರಿ ಪ್ರದೀಪ್‌ಕುಮಾರ್‌ ಗುಪ್ತಾ ಅವರ ಶವವಿತ್ತು. ಆ ಪೆಟ್ಟಿಗೆ ಬೋಳು, ಬೋಳಾಗಿತ್ತು. ತಮ್ಮ ಪತಿಯ ಕಳೇಬರವಿದ್ದ ಪೆಟ್ಟಿಗೆಯ ಮೇಲಿಂದ ಒಂದೆರಡು ಹಾರ ತೆಗೆದು ಆ ಪೆಟ್ಟಿಗೆಗೂ ಹಾಕಿದ್ದರು ಸೋನಿಯಾ.

ಸೂತಕದ ನಡುವೆ ಸೋನಿಯಾಗೆ ಅಮ್ಮ ಪೋಲಾ ಮೈನೊರಿಂದ ‘ಇಟಲಿಗೆ ವಾಪಸಾಗು’ ಎಂಬ ಕರೆಯೂ ಬಂದಿತ್ತು. ‘ಇಲ್ಲ, 23 ವರುಷಗಳು ಇಲ್ಲಿ ಕಳೆದಾಗಿದೆ. ಇದೇ ನನ್ನ ಮನೆ’  ಎಂದು ಅಮ್ಮನಿಗೆ ದೃಢವಾಗಿ ಉತ್ತರಿಸಿದ್ದರು ಸೋನಿಯಾ.

ಒಂದೆರಡು ವಾರಗಳಲ್ಲಿ ಕಾಂಗ್ರೆಸ್‌ನ ಹಿರಿಯಾಳುಗಳು ಸೋನಿಯಾ ಭೇಟಿಯಾಗಲು ಬಂದಿದ್ದರು. ‘ಕಾಂಗ್ರೆಸ್‌ ಅಧ್ಯಕ್ಷೆಯಾಗಿ ನಿಮ್ಮನ್ನು ಸರ್ವಾನುಮತದಿಂದ ಆರಿಸಲಾಗಿದೆ. ರಾಜೀವ್‌ ಜಾಗವನ್ನು ನೀವೊಬ್ಬರೇ ತುಂಬಲು ಸಾಧ್ಯ’ ಎಂದು ಒತ್ತಾಯಿಸಿದ್ದರು.  ‘ನನ್ನನ್ನು ಪರಿಗಣಿಸಿರುವುದಕ್ಕೆ ಧನ್ಯವಾದ. ಅಷ್ಟು ದೊಡ್ಡ ಸ್ಥಾನಕ್ಕೇರುವಷ್ಟು ಅರ್ಹತೆ ನನಗಿಲ್ಲ. ನನ್ನ ಮಕ್ಕಳು ಚಿಕ್ಕವರು ಬೇರೆ...’ ಅಲ್ಲಿಗೆ ಮಾತು ಮುಗಿದಿತ್ತು.

1965ರ ಚಳಿಗಾಲದ ಒಂದು ಸಂಜೆ ಲಾಲ್‌ ಬಹದ್ದೂರ್‌ ಶಾಸ್ತ್ರಿ ಸಂಪುಟದಲ್ಲಿ ಸಚಿವೆಯಾಗಿದ್ದ ಇಂದಿರಾ ಗಾಂಧಿ ಹಾಗೂ ಇಟಲಿ ಹುಡುಗಿ ಸೋನಿಯಾ ಭೇಟಿಗೆ ಸಮಯ ನಿಗದಿಯಾಗಿತ್ತು. ‘ಅವರನ್ನು ಹೇಗೆ ಕರೆಯಬೇಕು. ಅವರು ನನ್ನನ್ನು ಇಷ್ಪಪಡುತ್ತಾರಾ ಅಥವಾ ಬೈಯ್ದುಬಿಡುತ್ತಾರಾ?’ ಎಂಬೆಲ್ಲ ಪ್ರಶ್ನೆಗಳೊಂದಿಗೆ ಪ್ರೇಮಿ ರಾಜೀವ್‌ ಕೈಹಿಡಿದು ಕಂಪಿಸುತ್ತಲೇ ಲಂಡನ್‌ನ ಭಾರತೀಯ ರಾಯಭಾರ ಕಚೇರಿ ಮೆಟ್ಟಿಲೇರಿದ್ದರು ಸೋನಿಯಾ. ಸೋನಿಯಾ ಮೈನೊ ಎಂಬ ‘ವೆಲ್‌ ಮ್ಯಾನರ್ಡ್‌’  ಇಟಲಿ ಹುಡುಗಿ ಮೊದಲ ಭೇಟಿಯಲ್ಲೇ ಇಂದಿರಾ ಮನಗೆದ್ದಿದ್ದರು.

ಆದರೆ, ಕಾಣದ ದೇಶದ ಯುವಕನಿಗೆ ಮಗಳನ್ನು ಮದುವೆ ಮಾಡಿಕೊಡಲು ಒಪ್ಪದ ಸೋನಿಯಾ ಅಪ್ಪ ಸ್ಟಿಫಾನೊ ಮೈನೊ,  ‘ನನ್ನ ಮಗಳು ಚಿಕ್ಕವಳು, 21 ವರ್ಷಗಳಾಗುವವರೆಗೆ ಕಾಯಬೇಕು’ ಎಂದು ಹೇಳಿದ್ದರು. ಥೇಟ್‌ ಹಿಂದಿ ಸಿನಿಮಾಗಳ ಅಪ್ಪಂದಿರಂತೆ ಪ್ರೇಮಿಗಳಿಬ್ಬರು ಒಂದು ವರ್ಷ ಒಬ್ಬರನ್ನೊಬ್ಬರು ನೋಡಬಾರದು ಎಂದು ಷರತ್ತು ಹಾಕಿದ್ದರು. ಯೌವನದ ಉನ್ಮಾದದ ಈ ಪ್ರೀತಿ ವರುಷ ಕಳೆಯುವಷ್ಟರಲ್ಲಿ ಮಂಕಾಗುತ್ತದೆ ಎನ್ನುವ ನಂಬಿಕೆ ಅವರದಾಗಿತ್ತು. ಆದರೆ, ರಾಜೀವ್‌–ಸೋನಿಯಾ ನಡುವಣ ಪ್ರೇಮ ದಿನೇದಿನೇ ಗಟ್ಟಿಯಾಗತೊಡಗಿತ್ತು. ಅದೇ ಹುಕಿಯಲ್ಲಿ ಸೋನಿಯಾ 1968ರ ಜನವರಿಯಲ್ಲಿ ದೆಹಲಿಗೆ ಬಂದಿಳಿದರು. ದೆಹಲಿಯ ಹಳೆಯ ಏರ್‌ಪೋರ್ಟಿನಲ್ಲಿ ಮೊದಲ ಬಾರಿ ಕೇಳಿದ ಕಾಗೆಗಳ ಕೂಗು, ಬಿರುಬಿಸಿಲು, ಕಟ್ಟಿಗೆ ಸುಟ್ಟಂತಹ ವಾಸನೆಯ ಹವೆ... ಎಲ್ಲವನ್ನೂ ಒಪ್ಪಿಕೊಂಡಂತೆ ಈ ದೇಶವನ್ನೂ ಅಪ್ಪಿಕೊಂಡರು.

ಅಪರಿಚಿತರು, ಅತಿಥಿಗಳ ಬಳಿ ಮಾತನಾಡಲು ಹಿಂಜರಿಯುತ್ತಿದ್ದ, ಜನರ ನಡುವೆ ಬೆರೆಯದ ಸೊಸೆಯ ಸಂಕೋಚ ಸ್ವಭಾವದ ಬಗ್ಗೆ ಇಂದಿರಾ ತಮ್ಮ ಆತ್ಮೀಯರ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದೂ  ಉಂಟು. ಆದರೆ, ಕೊಂಕು–ಬಿಂಕು ಇಲ್ಲದ, ಎಲ್ಲರನ್ನೂ ಪ್ರೀತಿಸುವ ಆಕೆಯ ಸರಳ ವ್ಯಕ್ತಿತ್ವ ಅವರನ್ನು ಕಟ್ಟಿಹಾಕಿತ್ತು.

1984ರಲ್ಲಿ ಇಂದಿರಾ ಹತ್ಯೆಯ ನಂತರ ಪ್ರಧಾನಿ ಹುದ್ದೆಗೆ ರಾಜೀವ್‌ ಸಹಜ ಆಯ್ಕೆಯಾಗಿದ್ದರು. ಆದರೆ, ಸೋನಿಯಾ ಮಾತ್ರ ಇದನ್ನು ಶತಾಯಗತಾಯ ಒಪ್ಪಲಿಲ್ಲ. ರಾಜಕೀಯ ಮತ್ತು ಪ್ರಧಾನಿ ಹುದ್ದೆಯ ಹೊಣೆಗಾರಿಕೆಯಲ್ಲಿ ಕೌಟುಂಬಿಕ ಬದುಕು ಕಳೆದುಹೋಗುತ್ತದೆ ಎನ್ನುವ ಅರಿವು ಅವರಿಗಿತ್ತು. ಅತ್ತೆ ಇಂದಿರಾ ಅವರ ದುರಂತ ಅಂತ್ಯವೂ ಅವರಲ್ಲಿ ಭೀತಿ ಹುಟ್ಟಿಸಿತ್ತು. ಕೆಲ ವರ್ಷಗಳಲ್ಲೇ ಸೋನಿಯಾ ಕಂಡ ದುಃಸ್ವಪ್ನ ನಿಜವಾಗಿತ್ತು. ಆತ್ಮಸಂಗಾತಿಯ ಸಾವು ದಿಕ್ಕೆಡಿಸಿದರೂ ದೇಶ ಬಿಡಲು ಅವರ ಮನಸ್ಸು ಒಪ್ಪಲಿಲ್ಲ. ಯೌವನದ ಹೊಸ್ತಿಲಲ್ಲಿದ್ದ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಹೆಚ್ಚು, ಕಡಿಮೆ ಅಜ್ಞಾತ ಜೀವನ ಸಾಗಿಸುತ್ತಿದ್ದರು.

1996ರಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಕಂಟಕ ಎದುರಾಗಿತ್ತು. ಆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿತ್ತು. ಅಧ್ಯಕ್ಷ ಸೀತಾರಾಂ ಕೇಸರಿ ಅವರ ವಿರುದ್ಧ ಹಿರಿಯ ನಾಯಕರೆಲ್ಲ ಬಂಡೇಳತೊಡಗಿದ್ದರು. ಗಾಂಧಿ ಕುಟುಂಬದ ಕೆಲ ನಿಷ್ಠಾವಂತರು ಸೋನಿಯಾ ಮನೆ ಬಾಗಿಲು ತಟ್ಟಿದರು. ಪಕ್ಷದ ಅವನತಿ ಸಹಿಸಲಾಗದೇ ಆಹ್ವಾನವನ್ನು ಒಪ್ಪಿಕೊಂಡರು ಸೋನಿಯಾ.  1997ರ ಎಐಸಿಸಿ ಅಧಿವೇಶನದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದರು. ಅದಾದ ಕೆಲ ದಿನಗಳಲ್ಲೇ ಕಾಂಗ್ರೆಸ್‌ನ ಅಧ್ಯಕ್ಷೆಯೂ ಆದರು.

ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಅವರು ತೆಗೆದುಕೊಂಡ ನಿರ್ಧಾರಗಳು, ರಾಷ್ಟ್ರೀಯ ಸಲಹಾ ಸಮಿತಿಯ ಮುಖ್ಯಸ್ಥೆಯಾಗಿ ತೆಗೆದುಕೊಂಡ ಕೆಲ ತೀರ್ಮಾನಗಳು ಭಾರತದ ಗತಿಯನ್ನು ಬದಲಿಸಿವೆ. ವಿರೋಧ ಪಕ್ಷಗಳಿಗೆ ಉಸಿರೆತ್ತಲು ಅವಕಾಶ ನೀಡದಂತೆ 2007ರಲ್ಲಿ ಪ್ರತಿಭಾ ಪಾಟೀಲ್‌ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ್ದು, 2009ರಲ್ಲಿ ಮೀರಾಕುಮಾರ್‌ ಅವರನ್ನು ಲೋಕಸಭೆಯ ಸ್ಪೀಕರ್‌ ಅಭ್ಯರ್ಥಿಯಾಗಿ ಹೆಸರಿಸಿದ್ದು ಸೋನಿಯಾ ಚಾಣಾಕ್ಷತನದ ನಡೆಗಳಾಗಿವೆ. ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗಾವಕಾಶ ಒದಗಿಸುವ ನರೇಗಾ ಯೋಜನೆ, ಮಾಹಿತಿ ಹಕ್ಕು ಕಾಯ್ದೆ, ಆಹಾರ ಭದ್ರತಾ ಕಾಯ್ದೆ ಸೇರಿದಂತೆ ಹಲವು ಪ್ರಗತಿಪರ ಕಾಯ್ದೆ, ಯೋಜನೆಗಳ ಹಿಂದೆ ಅವರ ಕನಸುಗಳಿವೆ.

ಅವನತಿ ಹೊಂದುತ್ತಿದ್ದ ಪಕ್ಷಕ್ಕೆ ಅಧ್ಯಕ್ಷೆಯಾಗಿ ಚೈತನ್ಯ ನೀಡಿದ್ದು, ಯುಪಿಎ ಆಡಳಿತದ 10 ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷಗಳ ನಡುವೆ ಒಡಕು ಮೂಡದಂತೆ ನೋಡಿಕೊಂಡಿದ್ದು ಅವರ ಹೆಗ್ಗಳಿಕೆ. 2014ರ ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್‌ ಮಂಕಾಗತೊಡಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಈಗ ಪಕ್ಷದಲ್ಲಿ  ಹೊಸ ನೀರು ಹರಿಯಬೇಕಿದೆ. 71ರ ಇಳಿವಯಸ್ಸಿನಲ್ಲಿರುವ ಅವರ ಆರೋಗ್ಯವೂ ಕುಸಿಯತೊಡಗಿದೆ. ಶುಕ್ರವಾರ, ಡಿಸೆಂಬರ್‌ 15ರಂದು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಮುನ್ನ, ‘ಈಗ ನಿವೃತ್ತಿಯ ಕಾಲ’ ಎಂಬ ಪ್ರಬುದ್ಧ ಮಾತುಗಳನ್ನಾಡಿದ್ದಾರೆ ಸೋನಿಯಾ.

ಕಾಂಗ್ರೆಸ್‌ ಪಕ್ಷ ಹಾಗೂ ನೆಹರೂ–ಗಾಂಧಿ ಕುಟುಂಬದ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಈ ವಿದ್ಯಮಾನಗಳೆಲ್ಲ ಸೋನಿಯಾ ಅವರ ವ್ಯಕ್ತಿತ್ವವನ್ನು ಇಡಿಯಾಗಿ ಕಟ್ಟಿಕೊಡುವುದಿಲ್ಲ. ಆದರೆ, 1968ರಲ್ಲಿ ಭಾರತಕ್ಕೆ ನವವಧುವಾಗಿ ಕಾಲಿಟ್ಟಾಗಿನಿಂದ ಈ 49 ವರ್ಷಗಳಲ್ಲಿ ಆಕೆ ಅನುಭವಿಸಿದ ದ್ವಂದ್ವ, ಸಂಕಟ, ಹೋರಾಟಗಳು ಎಂಥವು ಎಂಬುದಕ್ಕೆ ಸಾಕ್ಷಿಯಾಗಿವೆ. ಇಟಲಿಯ ಹಳ್ಳಿಗಾಡಿನ ಸಾಂಪ್ರದಾಯಿಕ ಕ್ಯಾಥೋಲಿಕ್‌ ಕುಟುಂಬವೊಂದರ ಹೆಣ್ಣುಮಗಳು
ಪ್ರೀತಿಸಿದವನಿಗಾಗಿ ಪೌರಾತ್ಯ ದೇಶವೊಂದಕ್ಕೆ ಬಂದು ನೆಲೆ ನಿಂತಿದ್ದು, ತಾನು ಸೇರಿದ ಕುಟುಂಬವನ್ನಷ್ಟೇ ಅಲ್ಲ, ಈ ದೇಶವನ್ನೂ ಪ್ರೀತಿಸಿದ್ದು, ಆಲದ ಮರದಂತಹ ‍ಬೃಹತ್‌ ಪಕ್ಷವನ್ನು 19 ವರ್ಷಗಳ ಕಾಲ ಮುನ್ನಡೆಸಿದ್ದು ಎಲ್ಲವೂ ದಂತಕತೆಯಂತೆ ತೋರುತ್ತದೆ. ಆಕೆಯೊಂದು ‘ಅಗ್ನಿದಿವ್ಯ’ ದಾಟಿ ಬಂದಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT