ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮೀಣ ಕ್ರೀಡೆಗಳತ್ತ ಯುವಜನರ ಗಮನ ಅವಶ್ಯ’

Last Updated 18 ಡಿಸೆಂಬರ್ 2017, 4:56 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ಇಂದಿನ ಮಕ್ಕಳಿಗೆ ಕ್ರೀಡೆ ಎಂಬುದು ವೀಡಿಯೊ ಗೇಮ್‌ಗಳಿಗಷ್ಟೇ ಸೀಮಿತಗೊಂಡಿರುವುದು ವಿಷಾದದ ಸಂಗತಿ. ಅವರನ್ನು ಗ್ರಾಮೀಣ ಆಟೋಟಗಳತ್ತ ಸೆಳೆಯುವ ಪ್ರಯತ್ನ ಆಗಬೇಕಿದೆ ಎಂದು ಸಂಸದ ಡಿ.ಕೆ. ಸುರೇಶ್ ಅಭಿಪ್ರಾಯಪಟ್ಟರು.

ಬಿಡದಿಯ ಎಬಿಎಂ ಇನ್ಫೋಸಿಟಿ ಬಡಾವಣೆಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ, ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಹಾಗೂ ಎಂ.ಆರ್. ಜಯ ಕರ್ನಾಟಕ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ 52ನೇ ಗುಡ್ಡಗಾಡು ಓಟದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಯುವ ಜನರಿಗೆ ತರಬೇತಿ ಹಾಗೂ ಮೂಲ ಸೌಕರ್ಯ ನೀಡುವಲ್ಲಿ ಸರ್ಕಾರಗಳು ಸೋತಿವೆ. ಮುಖ್ಯವಾಗಿ ಗ್ರಾಮೀಣ ಆಟೋಟಗಳತ್ತ ಯುವಕರನ್ನು ಸೆಳೆಯುವ ಪ್ರಯತ್ನ ಆಗಬೇಕಿದೆ ಎಂದರು.

ವ್ಯಾಪಾರೀಕರಣ ಸಲ್ಲ: ಇಂದು ಕ್ರಿಕೆಟ್, ಟೆನಿಸ್, ಫುಟ್‌ಬಾಲ್‌ಗಳ ಜೊತೆಗೆ ಕಬಡ್ಡಿಗೂ ಹೊಸ ರಂಗು ಸಿಕ್ಕಿದೆ. ಆದರೆ ಈ ನೆಪದಲ್ಲಿ ಕ್ರೀಡೆಗಳು ವ್ಯಾಪಾರೀಕರಣಗೊಳ್ಳುತ್ತಿರುವುದು ಆತಂಕದ ಸಂಗತಿ. ಕ್ರೀಡೆ, ಕಲೆ ಹಾಗೂ ಸಾಹಿತ್ಯಗಳನ್ನು ಯಾವತ್ತೂ ವ್ಯಾಪಾರದ ದೃಷ್ಟಿಯಿಂದ ನೀಡಬಾರದು ಎಂದರು.

ಶಾಸಕ ಎಚ್‌.ಸಿ. ಬಾಲಕೃಷ್ಣ ಮಾತನಾಡಿ ‘ನಾವು ಓದುವ ಕಾಲದಲ್ಲಿ ದಿನದ ಕೊನೆಯ ತರಗತಿ ಆಟಕ್ಕೆ ಮೀಸಲಾಗಿತ್ತು. ಆದರೆ ಮಕ್ಕಳಿಗೆ ಇಂದು ಅದಕ್ಕೆ ಅವಕಾಶ ಇಲ್ಲದಿರುವುದು ದುರಂತ. ನಮ್ಮ ಗ್ರಾಮೀಣ ಕ್ರೀಡಾಪಟುಗಳಲ್ಲಿ ಪೌಷ್ಟಿಕಾಂಶದ ಕೊರತೆ ಇದ್ದು, ಅವರಿಗೆ ಉತ್ತಮ ಆಹಾರ ಮತ್ತು ವೃತ್ತಿಪರ ತರಬೇತಿಯ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆಯ ಅಧ್ಯಕ್ಷ ಮುತ್ತಪ್ಪ ರೈ ಮಾತನಾಡಿ ‘ಕೇವಲ ಕ್ರಿಕೆಟ್‌ನಂತಹ ಕ್ರೀಡೆಗೆ ಮಾತ್ರವಲ್ಲದೆ ಅಥ್ಲೆಟಿಕ್ಸ್, ಕಬಡ್ಡಿ, ಕೊಕ್ಕೊದಂತಹ ಗ್ರಾಮೀಣ ಕ್ರೀಡೆಗಳಿಗೂ ಪ್ರೋತ್ಸಾಹ ಸಿಗಬೇಕಿದೆ. ಈ ನಿಟ್ಟಿನಲ್ಲಿ ರಾಮನಗರದಲ್ಲಿ ಈ ಓಟ ಆಯೋಜಿಸಿದ್ದು, 600ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಒಟ್ಟು ₨ 2 ಲಕ್ಷ ಮೊತ್ತದ ನಗದು ಬಹುಮಾನ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಟೂರ್ನಿಗಳ ಆಯೋಜನೆಗೆ ಸಿದ್ಧರಿದ್ದೇವೆ’ ಎಂದು ಮಾಹಿತಿ ನೀಡಿದರು.

ಬಿಡದಿ ಪುರಸಭೆ ಅಧ್ಯಕ್ಷೆ ವೆಂಕಟೇಶಮ್ಮ, ಅನುರಾಧಾ ಮುತ್ತಪ್ಪ ರೈ, ಜಯ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಎನ್‌. ದೀಪಕ್‌, ಸುನಿಲ್‌ಕುಮಾರ್‌ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಉದಯ ಪ್ರಭು, ಕೆ.ಎಂ. ಜಗದೀಶ್‌, ಡಿ.ಜಿ. ಕುಮಾರ್‌, ರವಿ, ಕರ್ನಾಟಕ ಅಥ್ಲೆಟಿಕ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್‌. ಚಂದ್ರಶೇಖರ್‌ ರೈ, ಜಿಲ್ಲಾ ಕಾರ್ಯದರ್ಶಿ ಉಮೇಶ್‌ ಬಾಬು ಇದ್ದರು. ಎಂ.ಆರ್‌. ಜಯಕರ್ನಾಟಕ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ರೈ ನಿರೂಪಿಸಿದರು.

ಅಪರ್ಣಾಗೆ ಪ್ರಶಸ್ತಿ: ಮರಿಯಪ್ಪನ್‌ಗೆ ಸನ್ಮಾನ

ಪ್ಯಾರ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಕ್ರೀಡಾಪಟು ತಮಿಳುನಾಡಿನ ಮರಿಯಪ್ಪನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರನ್ನು ಮುತ್ತಪ್ಪ ರೈ ಸನ್ಮಾನಿಸಿದರು.
ರಾಮನಗರದ ಅಥ್ಲೀಟ್‌ ಕೆ. ಅಪರ್ಣಾ ಮಹಿಳೆಯರ 10 ಕಿ.ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದರು. ಅವರು ಈ ಗುರಿಯನ್ನು 40 ನಿಮಿಷ 46 ಸೆಕೆಂಡುಗಳಲ್ಲಿ ಕ್ರಮಿಸಿದ್ದು, ಕೇವಲ 45 ಸೆಕೆಂಡುಗಳ ಅಂತರದಲ್ಲಿ ಅಗ್ರ ಸ್ಥಾನದಿಂದ ವಂಚಿತರಾದರು. ಆದಾಗ್ಯೂ ಗೋವಾದಲ್ಲಿ ಜನವರಿ 14ರಂದು ನಡೆಯಲಿರುವ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT