ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲಿನಲ್ಲೇ ಪಂಪ್‌ಸೆಟ್‌ಗೆ ವಿದ್ಯುತ್‌ ನೀಡಿ

Last Updated 18 ಡಿಸೆಂಬರ್ 2017, 6:20 IST
ಅಕ್ಷರ ಗಾತ್ರ

ಕುಷ್ಟಗಿ: ‘ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುತ್ತಿರುವ ಏಳು ತಾಸು 3 ಫೇಸ್‌ ವಿದ್ಯುತ್‌ ಅನ್ನು ಹಗಲಿನಲ್ಲಿ ನಿರಂತರವಾಗಿ ನೀಡುವಂತೆ ರೈತರು ಒತ್ತಾಯಿಸಿದರು. ಪಟ್ಟಣದ ಜೆಸ್ಕಾಂ ಉಪ ವಿಭಾಗದಲ್ಲಿ ನಡೆದ ವಿದ್ಯುತ್‌ ಗ್ರಾಹಕರೊಂದಿಗೆ ಸಂವಾದ ಮತ್ತು ಚರ್ಚೆ ಕಾರ್ಯಕ್ರಮದಲ್ಲಿ ಈ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

‘ಬೆಳಗಿನ ಜಾವ ನಾಲ್ಕು ಗಂಟೆಯಿಂದ ವಿದ್ಯುತ್‌ ಪೂರೈಸುತ್ತೀರಿ ಆದರೆ ಆರು ಗಂಟೆವರೆಗೂ ಕತ್ತಲು ಇರುತ್ತದೆ. ಅಂತಹ ಸಮಯದಲ್ಲಿ ರೈತ ತನ್ನ ಹೊಲಕ್ಕೆ ನೀರು ಹರಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಸಮಯ ಬದಲಾವಣೆ ಮಾಡುಬೇಕು ಎಂದು’ ರೈತ ಮುಖಂಡ ಆರ್‌.ಪಿ.ನಾಯಕ್‌ ಇತರ ರೈತರು ಒತ್ತಾಯಿಸಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ತಿರುಪತಿ ಕಮತರ ಮಾತನಾಡಿ, ‘ಮೂರು ಫೇಸ್‌ ವಿದ್ಯುತ್‌ ಪೂರೈಸುವ ಸಮಯ ನಿಗದಿಪಡಿಸುವುದು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕು. ಹಗಲಿನಲ್ಲಿ ವಿದ್ಯುತ್‌ ಪೂರೈಸಲು ಆದ್ಯತೆ ಇದ್ದರೂ ಕಾಲಕಾಲಕ್ಕೆ ಬದಲಾಗುವ ಬೇಡಿಕೆ ಮತ್ತು ಉತ್ಪಾದನೆ ವ್ಯತ್ಯಾಸದಿಂದ ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. ಈ ತಾಲ್ಲೂಕು ಅಂತರ್ಜಲ ಕಪ್ಪು ಪಟ್ಟಿಯಲ್ಲಿ ಇರುವುದರಿಂದ ನಿರಂತರ ವಿದ್ಯುತ್‌ ಪೂರೈಸುವಲ್ಲಿ ನಿರ್ಬಂಧವೂ ಇದೆ. ರೈತರ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ’ ಎಂದು ಹೇಳಿದರು.

ಕೆಲಸದ ಆದೇಶ ನೀಡಿದ್ದರೂ ಕೆಲ ವಿದ್ಯುತ್‌ ಗುತ್ತಿಗೆದಾರರು ಕಂಬ, ಪರಿವರ್ತಕಗಳನ್ನು ಅಳವಡಿಸಿಲ್ಲ. ಬಹುತೇಕ ಪರಿವರ್ತಕಗಳ ಅರ್ಥಿಂಗ್‌ ವ್ಯವಸ್ಥೆ ಹಾಳಾಗಿದ್ದರಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಾಸವಾಗಿ ಮನೆಯಲ್ಲಿರುವ ಎಲೆಕ್ಟ್ರಾನಿಕ್‌ ಉಪಕರಣಗಳು ಸುಟ್ಟು ಹೋಗುತ್ತಿವೆ. ಈ ಬಗ್ಗೆ ಗಮನಹರಿಸದ ಜೆಸ್ಕಾಂ ಬಗ್ಗೆ ಕರವೇ ಜಿಲ್ಲಾ ಅಧ್ಯಕ್ಷ ಬಸನಗೌಡ ಪೊಲೀಸಪಾಟೀಲ ಅತೃಪ್ತಿ ಹಾಕಿದರು.

ಅರ್ಥಿಂಗ್‌ ವ್ಯವಸ್ಥೆ ಹಾಳಾದರೆ ತಕ್ಷಣ ಗೊತ್ತಾಗುತ್ತದೆ. ಅಂಥ ಸಂದರ್ಭದಲ್ಲಿ ಸೂಕ್ತ ನಿರ್ವಹಣೆ ಮಾಡಲಾಗುತ್ತದೆ ಎಂದು ಎಂಜಿನಿಯರ್‌ ವಿವರಿಸಿದರು. ಕಂಬಗಳನ್ನು ಕೆಲಸ ನಿರ್ವಹಿಸದ ಗುತ್ತಿಗೆದಾರರನ್ನು ಬದಲಿಸುವಂತೆ ಸಭೆಯಲ್ಲಿ ಗ್ರಾಹಕರು ಒತ್ತಾಯಿಸಿದರು.ಗೋತಗಿ ಗ್ರಾಮದ ಗಣೇಶ ನಗರದ ಜನವಸತಿ ಪ್ರದೇಶದ ಮೇಲೆ ಹಾದುಹೋಗಿರುವ

11 ಕೆವಿ ವಿದ್ಯುತ್‌ ಮಾರ್ಗದಿಂದ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಮಾರ್ಗ ಬದಲಾವಣೆ ಮಾಡುವಂತೆ ಅನೇಕ ಬಾರಿ ಮನವಿ ಮಾಡಿದರೂ ಎಂಜಿನಿಯರ್‌ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಹಕರು ತಮ್ಮ ಆರ್‌.ಆರ್‌. ಸಂಖ್ಯೆಗೆ ಬೇರೆಯವರ ಮೊಬೈಲ್‌ ಸಂಖ್ಯೆಗಳನ್ನು ನೀಡಿರುವುದರಿಂದ ನಿರ್ದಿಷ್ಟ ಗ್ರಾಹಕರಿಗೆ ಬಿಲ್‌ ಪಾವತಿಗೆ ಸಂಬಂಧಿಸಿದ ಮೊಬೈಲ್‌ ಸಂದೇಶ ತಲುಪುತ್ತಿಲ್ಲ. ಸಮಪರ್ಕ ಸಂಖ್ಯೆ ಜೋಡಿಸುವಂತೆ ಎಂಜಿನಿಯರ್‌ ಸೂಚಿಸಿದರು. ಸಹಾಯಕ ಎಂಜಿನಿಯರ್‌ಗಳಾದ ಪುರುಷೋತ್ತಮ ನವಲಿ, ಎ.ಬಿ.ಅಡಗಿ, ಹಿರಿಯ ಸಹಾಯಕರಾದ ರಾಮಪ್ಪ, ಹುಲ್ಲಪ್ಪ ಹಕ್ಕಿ, ತಾಂತ್ರಿಕ ಸಹಾಯಕಿ ರೂಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT