ಗದಗ: ನಗರದಲ್ಲಿ ಕಟೌಟ್, ಬ್ಯಾನರ್, ಫ್ಲೆಕ್ಸ್, ಜಾಹೀರಾತು ಫಲಕಗಳನ್ನು ಪೂರ್ವಾನುಮತಿ ಇಲ್ಲದೇ ಹಾಕತಕ್ಕದ್ದಲ್ಲ. ನಿಯಮ ಉಲ್ಲಂಘಿಸಿದರೆ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ.
‘ಇತ್ತೀಚೆಗೆ ನಡೆದ ಗದಗ ಉತ್ಸವದಲ್ಲಿ ಈ ಎರಡೂ ನಿಯಮಗಳು ಉಲ್ಲಂಘನೆ ಆಗಿದ್ದವು. ತಡವಾಗಿ ಆದರೂ, ಸರ್ಕಾರಿ ನಿಯಮಗಳ ಬಗ್ಗೆ ಜಿಲ್ಲಾಧಿಕಾರಿಗೆ ಜ್ಞಾನೋದಯ ಆಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಗದಗ ಉತ್ಸವದಲ್ಲಿ ಈ ನಿಯಮಗಳು ಇರಲಿಲ್ಲವೇ, ಅಂದು ಈ ಎಲ್ಲ ನಿಯಮಗಳು ಉಲ್ಲಂಘನೆ ಆದಾಗ ಸುಮ್ಮನೆ ಕುಳಿತು, ಈಗ ಬಿಜೆಪಿ ಪರಿವರ್ತನಾ ಯಾತ್ರೆ ಗದಗ ಜಿಲ್ಲೆಗೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಸುತ್ತೋಲೆ ಹೊರಡಿಸಿದ್ದನ್ನು ಗಮನಿಸಿದರೆ ಜಿಲ್ಲಾಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಸ್ಪಷ್ಟವಾಗುತ್ತದೆ’ ಎಂದು ಅವರು ಆರೋಪಿಸಿದ್ದಾರೆ.